ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಪತನದಲ್ಲಿ ಮೃತಪಟ್ಟ ಮಾಜಿ ಸಿಎಂ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ಸೋಮವಾರ ರಾತ್ರಿ ರಾಜ್ ಕೋಟ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗು ಬಿಜೆಪಿ ಹಿರಿಯ ಮುಖಂಡರು ಅಗಲಿದ ನಾಯಕನಿಗೆ ಪುಷ್ಪನಮನದ ಮೂಲಕ ಅಂತಿಮ ಗೌರವ ಸಲ್ಲಿಸಿದರು.
ರಾಜ್ ಕೋಟ್ ಏರ್ ಪೋರ್ಟ್ ನಿಂದ ರೂಪಾನಿ ನಿವಾಸಕ್ಕೆ ಮೃತದೇಹವನ್ನು ತರುತ್ತಿದ್ದಾಗ ರಸ್ತೆಯ ಇಕ್ಕೆಲಗಳಲ್ಲೂ ನಿಂತಿದ್ದ ಸಾವಿರಾರು ಸಾರ್ವಜನಿಕರು “ವಿಜಯ್ ಭಾಯಿ ತುಮ್ ಅಮರ್ ರಹೋ”(ವಿಜಯ್ ಅಣ್ಣಾ ಅಮರರಾಗಿ) ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ನಂತರ ನಿವಾಸದಿಂದ ವಿದ್ಯುತ್ ಚಿತಾಗಾರಕ್ಕೆ ಮೃತದೇಹವನ್ನು ಪುಷ್ಪಾಲಂಕೃತ ವಿಶೇಷ ವಾಹನದಲ್ಲಿ ಮೆರವಣಿಗೆಯೊಂದಿಗೆ ತರಲಾಯಿತು.
ಅಂತ್ಯಂಸ್ಕಾರದ ವೇಳೆ ಅಪಾರ ಬಂಧು ಮಿತ್ರರು, ಗೃಹ ಸಚಿವ ಅಮಿತ್ ಶಾ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. 21 ಗನ್ ಸೆಲ್ಯೂಟ್ ಮೂಲಕ ಅಗಲಿದ ಹಿರಿಯ ಧುರೀಣನಿಗೆ ಸರ್ಕಾರಿ ಗೌರವ ನೀಡಲಾಯಿತು.