ಹೊಸದಿಗಂತ ವರದಿ ಮಡಿಕೇರಿ:
ಮೂತ್ರ ವಿಸರ್ಜನೆಗೆ ತೆರಳಿದ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ಮಂಗಳವಾರ ರಾತ್ರಿ ಪೊನ್ನಂಪೇಟೆ ಸಮೀಪದ ಬಾಳೆಲೆಯಲ್ಲಿ ನಡೆದಿದೆ.
ಬಾಳೆಲೆ ಸಮೀಪದ ಜಾಗಲೆ ಎಂಬಲ್ಲಿ ಅಳಮೇಂಗಡ ಬಿದ್ದಪ್ಪ ಎಂಬವರ ತೋಟದ ಲೈನ್’ಮನೆಯಲ್ಲಿ ವಾಸಿಸುತ್ತಿದ್ದ ಕಾಕು ಎಂಬವರ ಪುತ್ರ ಕುಳ್ಳ (42) ಎಂಬವರೇ ಕರಡಿ ದಾಳಿಯಿಂದ ಗಂಭೀರ ಗಾಯಗೊಂಡವರಾಗಿದ್ದಾರೆ.
ಮಂಗಳವಾರ ರಾತ್ರಿ 11 ಗಂಟೆ ಸಮಯದಲ್ಲಿ ಮನೆಯ ಹೊರಗಡೆ ಮೂತ್ರ ವಿಸರ್ಜನೆಗೆಂದು ತೆರಳಿದ ಸಂದರ್ಭ ಕರಡಿ ದಾಳಿ ನಡೆಸಿ ಹಣೆ ಹಾಗೂ ಮುಖದ ಭಾಗಕ್ಕೆ ಗಂಭೀರವಾಗಿ ಗಾಯಗೊಳಿಸಿದೆ.
ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.