ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ ಸಿಬಿ ಗೆಲುವಿನ ಸಂಭ್ರಮಾಚರಣೆ ಸಮಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ11 ಜನರು ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ನ ವಿಭಾಗೀಯ ಪೀಠ ಸೋಮವಾರ (ಜೂ.23) ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ನಡೆಸಿತು.
ಈ ಪ್ರಕರಣದಲ್ಲಿ ಅಮೈಕಸ್ ಕ್ಯೂರಿಯಾಗಿ (ನ್ಯಾಯಾಲಯಕ್ಕೆ ನೆರವಾಗುವ ವಕೀಲ) ಹಿರಿಯ ವಕೀಲೆ ಎಸ್.ಸುಶೀಲಾ ಅವರನ್ನು ಪೀಠ ನೇಮಕ ಮಾಡಿತು. ಪಿಐಎಲ್ ಹಾಗೂ ಪ್ರಕರಣದ ಇತರೆ ದಾಖಲೆಗಳನ್ನು ಎಸ್.ಸುಶೀಲಾರಿಗೆ ನೀಡಲು ಪೀಠ ಸೂಚನೆ ನೀಡಿತು.
ವಿಚಾರಣೆ ವೇಳೆ ಕೆಎಸ್ಸಿಎ, ಆರ್ಸಿಬಿ, ಡಿಎನ್ಎ ಪರ ವಕೀಲರು ಹಾಜರಾಗಿದ್ದರು. ರಾಜ್ಯ ಸರ್ಕಾರ ಘಟನೆಗೆ ಸಂಬಂಧಿಸಿದಂತೆ ಈವರೆಗೂ ಕೈಗೊಂಡ ಕ್ರಮದ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಕೆ ಮಾಡಿತು.
ಈ ವೇಳೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ವಿಚಾರಣೆಯನ್ನು ಅಮೈಕಸ್ ಕ್ಯೂರಿ ನೇಮಕದ ಬಳಿಕ ನಡೆಸಲಾಗುವುದು ಎಂದು ನ್ಯಾ.ವಿ.ಕಾಮೇಶ್ವರ ರಾವ್, ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿತು. ಈ ಪ್ರಕರಣದಲ್ಲಿ ಅಮೈಕಸ್ ಕ್ಯೂರಿಯಾಗಿ ಹಿರಿಯ ವಕೀಲೆ ಎಸ್.ಸುಶೀಲಾ ಅವರನ್ನು ಪೀಠ ನೇಮಕ ಮಾಡಿತು.
ಎಲ್ಲ ಅರ್ಜಿಗಳ ವಿಚಾರಣೆಯನ್ನು ಜುಲೈ 1 ಕ್ಕೆ ಮುಂದೂಡಿದೆ.
ಅಮಿಕಸ್ ಕ್ಯೂರಿ ಎಂದರೇನು?
ಅಮಿಕಸ್ ಕ್ಯೂರಿ ಎಂದರೆ “ನ್ಯಾಯಾಲಯದ ಸ್ನೇಹಿತ” ಎಂದರ್ಥ. ಅಮಿಕಸ್ ಕ್ಯೂರಿ ಸಾಮಾನ್ಯವಾಗಿ ಕಾನೂನು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರದ ವ್ಯಕ್ತಿ ಅಥವಾ ಗುಂಪಾಗಿರುತ್ತದೆ. ಆದರೆ ನ್ಯಾಯಾಲಯಕ್ಕೆ ವಿಷಯದ ಬಗ್ಗೆ ಉಪಯುಕ್ತ ಮಾಹಿತಿಯನ್ನು ಅಥವಾ ದೃಷ್ಟಿಕೋನವನ್ನು ಒದಗಿಸುವ ಮೂಲಕ ಸಹಾಯ ಮಾಡಲು ಅನುಮತಿ ಕೇಳುತ್ತದೆ. ಉದಾಹರಣೆಗೆ, ಇದು ಕಾನೂನಿನ ಬಗ್ಗೆ ಪರಿಣತಿಯನ್ನು ಹೊಂದಿರುವ ವ್ಯಕ್ತಿಯಾಗಿರಬಹುದು, ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿಷಯದ ಬಗ್ಗೆ ತಿಳಿದಿರುವ ಗುಂಪಾಗಿರಬಹುದು.