ಹೊಸ ದಿಗಂತ ವರದಿ,ಕಲಬುರಗಿ:
ಅಮೆರಿಕ ಪ್ರವಾಸಕ್ಕೆ ಕೇಂದ್ರ ಅನುಮತಿ ನಿರಾಕರಿಸಿದ್ದು, ರಾಜಕೀಯ ಕಾರಣವಲ್ಲದೇ, ಮತ್ತೇನು ಇಲ್ಲ ಎಂದು ಆರ್ಡಿಪಿಆರ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನಗರದ ಐವನ್ ಶಾಹಿ ಅತಿಥಿ ಗೃಹದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಅನುಮತಿ ನಿರಾಕರಣೆಯಿಂದಾಗಿ ರಾಜ್ಯಕ್ಕೆ ಬರಬೇಕಿದ್ದ ನಿರೀಕ್ಷಿತ 15,000 ಕೋಟಿ ರು.ಬಂಡವಾಳ ನಿಂತುಹೋಗಿದ್ದು, ಕನಿಷ್ಠ ಮೂರು ಸಾವಿರ ಜನರಿಗೆ ಉದ್ಯೋಗ ಕೈತಪ್ಪಿದೆ ಎಂದು ಹೇಳಿದರು.
ಕೇಂದ್ರ ವಿದೇಶಾಂಗ ಸಚಿವರಿಗೆ ಅನುಮತಿ ನಿರಾಕರಣೆಗೆ ವಿವರಣೆ ನೀಡುವಂತೆ ಪತ್ರ ಬರೆಯಲಾಗಿದೆ ಅವರಿಂದ ಇನ್ನೂ ಉತ್ತರ ಬಂದಿಲ್ಲ.ಅವರು ನಮ್ಮ ಯಾವ ಪತ್ರಕ್ಕೆ ಉತ್ತರ ಕೊಟ್ಟಿದ್ದಾರೆ? ಕೇಂದ್ರದಲ್ಲಿರುವುದು ಎನ್ ಡಿ ಎ ಸರ್ಕಾರವಲ್ಲ, ನೋ ಡಾಟಾ ಅವಲೇಬಲ್ ಸರ್ಕಾರ ಎಂದು ಟೀಕಿಸಿದರು.
ಈಗ ಅಮೆರಿಕ ಹೋಗಬಹುದೇ ಎಂದು ಕೇಳಲಾದ ಪ್ರಶ್ನೆಗೆ ‘ಟ್ರೇನ್ ಹೋದ ಮೇಲೆ ಟಿಕೇಟ್ ತಗೊಂಡು ಪ್ರಯೋಜನವೇನು?’ ಎಂದು ಸೂಚ್ಯವಾಗಿ ಹೇಳಿ, ಶರತ್ ಬಚ್ಚೇಗೌಡ ಅವರು ಅಮೇರಿಕಾದಿಂದ ವಾಪಸ್ ಬಂದ ಮೇಲೆ ಚರ್ಚಿಸಲಾಗುವುದು ಎಂದರು.