ಹೊಸ ದಿಗಂತ ವರದಿ, ಯಲ್ಲಾಪುರ :
ಯಲ್ಲಾಪುರ ತಾಲೂಕಿನ ಅರತಿಬೈಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಟಿ.ಟಿ.ವಾಹನದ ನಡುವೆ ಅಪಘಾತ ಸಂಭವಿಸಿ, 13 ಜನರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.
ಆರೋಪಿ ಲಾರಿ ಚಾಲಕ ಕೊಪ್ಪಳದ ಶಿವಕುಮಾರ್ ಬಿಡ್ನಾಳ್ ತನ್ನ ಲಾರಿಯನ್ನು ರಸ್ತೆಯ ಬಲಬದಿಯಲ್ಲಿ ನಿಲ್ಲಿಸಿದ್ದನು. ಇನ್ನೊಂದು ಲಾರಿ ಯಲ್ಲಾಪುರ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಟಿ.ಟಿ.ವಾಹನದ ಚಾಲಕ ಆರೋಪಿ ಹಗರಿಬೊಮ್ಮನಳ್ಳಿಯ ನಾಗರಾಜ ಹಿಟ್ನಳ್ಳಿ ಎಂಬಾತ ತನ್ನ ವಾಹನವನ್ನು ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಚಲಾಯಿಸಿಕೊಂಡುಬಂದು, ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲುಹೋಗಿ, ಯಲ್ಲಾಪುರ ಕಡೆಯಿಂದ ಬರುತ್ತಿದ್ದ ಮತ್ತೊಂದು ಲಾರಿಗೆ ಡಿಕ್ಕಿಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಟಿ.ಟಿ.ವಾಹನದಲ್ಲಿದ್ದ ಹೊಸಪೇಟೆಯ ಗಾದಿಗನೂರಿನ ಕುರುಬರ ಕೋರಿ ನವೀನ್ ಕುಮಾರ, ಕೆ.ಬಿ.ಗಾದೇಶ, ಕೆ.ಶ್ರೀಕಾಂತ, ಕುಮಾರ ಕೊರವರ್, ಕೆ.ಗಾದಿಲಿಂಗ, ಕೆ.ಪ್ರಜ್ವಲ್, ಕೋರಿ ಮಹೇಶ, ಕೆ.ಎರಿಸ್ವಾಮಿ, ಕಾಗಿ ಸಿದ್ದರಾಮ, ಸಂಡೂರಿನ ರಾಜು ಎರಿಸ್ವಾಮಿ, ಕುರುಗೋಡಿನ ಕಾರ್ತಿಕ, ಕೆ.ಎಮ್.ನಾಗರಾಜ, ಕೊಳಗಲ್ಲಿನ ಯು.ಸಾಗರ ಅವರಿಗೆ ಗಾಯವಾಗಿದೆ.
ಗಾಯಾಳುಗಳೆಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು, ಪ್ರವಾಸಕ್ಕೆಂದು ಉತ್ತರಕನ್ನಡ ಜಿಲ್ಲೆಗೆ ಬಂದಿದ್ದರು. ಈ ಕುರಿತು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ