ಹೊಸ ದಿಗಂತ ಡಿಜಿಟಲ್ ಡೆಸ್ಕ್:
1975ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರದ ಪ್ರಧಾನಿ ಇಂದಿರಾ ಗಾಂಧಿಯವರು ಭಾರತದಲ್ಲಿ ಹೇರಿದ ತುರ್ತು ಪರಿಸ್ಥಿತಿಗೆ 50ನೇ ವರ್ಷ ನಾಳೆಗೆ ಅಗಲಿದ್ದು, ಇದರ ನಡುವೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾಅವರು ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ .
ತುರ್ತು ಪರಿಸ್ಥಿತಿಯಂತಹ ದೊಡ್ಡ ಘಟನೆಯ ನೆನಪು ಜನರ ಮನಸಿನಿಂದ ಮರೆಯಾಗಲು ಪ್ರಾರಂಭಿಸಿದರೆ ಅದು ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಗಂಭೀರ ಆತಂಕವಾಗಿದೆ. ಈ ದೇಶದ ಜನರು ಎಂದಿಗೂ ಸರ್ವಾಧಿಕಾರವನ್ನು ಸ್ವೀಕರಿಸುವುದಿಲ್ಲ ಎಂದು ಅವರು ಹೇಳಿದರು.
ಇಂದು ನಾವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ತುರ್ತು ಪರಿಸ್ಥಿತಿಯಂತಹ ಕರಾಳ ಅಧ್ಯಾಯವನ್ನು ಜಯಿಸಲು ಕಾರಣ ನಮ್ಮ ರಾಷ್ಟ್ರವು ಎಂದಿಗೂ ಸರ್ವಾಧಿಕಾರಕ್ಕೆ ತಲೆಬಾಗುವುದಿಲ್ಲ ಎಂಬುದಾಗಿದೆ ಎಂದು ರಾಷ್ಟ್ರ ರಾಜಧಾನಿ ದಹಲಿಯಲ್ಲಿ ತುರ್ತು ಪರಿಸ್ಥಿತಿಯ ಕುರಿತು ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಹೇಳಿದರು.
ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಚೈತನ್ಯವು ಭಾರತದಲ್ಲಿ ಅಂತರ್ಗತವಾಗಿದೆ. 50 ವರ್ಷಗಳ ಹಿಂದೆ ನಡೆದದ್ದನ್ನು ಏಕೆ ಚರ್ಚಿಸಬೇಕು ಎಂದು ಅನೇಕ ಜನರು ಕೇಳುತ್ತಾರೆ? 50 ವರ್ಷಗಳು ನೆನಪುಗಳು ಮಸುಕಾಗಲು ಬಹಳ ಸಮಯ ಬೇಕಾಗದು. ಆದ್ದರಿಂದ, ತುರ್ತು ಪರಿಸ್ಥಿತಿಯ ಬಗ್ಗೆ ಸಮಾಜದ ಸ್ಮರಣೆಯನ್ನು ಪುನರ್ನಿರ್ಮಿಸಬೇಕು ಎಂದು ಅವರು ಹೇಳಿದರು.
ಈ ವೇಳೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ , ಜೂನ್ 25, 1975ರಂದು ತುರ್ತು ಪರಿಸ್ಥಿತಿ ಘೋಷಿಸುವ ಮೊದಲು ಅಂದಿನ ಪ್ರಧಾನಿ ಇಂದಿರಾ ಗಾಂಧಿ ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೇ? ಎಂದು ಕೇಳಿದರು.
ಇಂದು, ಕೆಲವರು ಸಂವಿಧಾನದ ಪಾವಿತ್ರ್ಯದ ಬಗ್ಗೆ ಬೋಧಿಸುತ್ತಾರೆ. ಆದರೆ ನಾನು ಕೇಳಲು ಬಯಸುತ್ತೇನೆ ನೀವು ಯಾವ ಪಕ್ಷಕ್ಕೆ ಸೇರಿದವರು? ಇಂದಿರಾ ಗಾಂಧಿ ಅವರು ಆಲ್ ಇಂಡಿಯಾ ರೇಡಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬೆಳಿಗ್ಗೆ ನೆನಪಿದೆಯೇ? ಇದಕ್ಕೂ ಮೊದಲು ಸಂಸತ್ತನ್ನು ಅವರು ಸಂಪರ್ಕಿಸಿದ್ದರೇ? ವಿರೋಧ ಪಕ್ಷದ ನಾಯಕರು ಮತ್ತು ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರೇ?” ಎಂದು ಅಮಿತ್ ಶಾ ಪ್ರಶ್ನಿಸಿದ್ದಾರೆ.