ಹೊಸದಿಗಂತ ವರದಿ ಚಿಕ್ಕಮಗಳೂರು:
ಶರಣಾಗತನಾಗಿದ್ದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಯನ್ನು ಕೇರಳ ಪೊಲೀಸರು ಬುಧವಾರ ಚಿಕ್ಕಮಗಳೂರು ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಿ.ಜಿ.ಕೃಷ್ಣಮೂರ್ತಿ ಮೇಲೆ ಚಿಕ್ಕಮಗಳೂರು, ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಒಟ್ಟು 66 ಪ್ರಕರಣಗಳು ದಾಖಲಾಗಿದ್ದವು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಸಂಬಂಧ ಕೇರಳ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ವಿಚಾರಣೆಯನ್ನು ಜುಲೈ 21ಕ್ಕೆ ಮುಂದೂಡಿದೆ. ವಿಚಾರಣೆ ಮುಗಿದ ಬಳಿಕ ಕೇರಳ ಪೊಲೀಸರು ಬಿ.ಜಿ.ಕೃಷ್ಣಮೂರ್ತಿಯನ್ನ ಮತ್ತೆ ತಮ್ಮ ವಶಕ್ಕೆ ಪಡೆದು ಕರೆದೊಯ್ದರು.
ನಕ್ಸಲ್ ನಾಯಕ ಸಾಕೇತ್ ರಾಜನ್ ಪೊಲೀಸ್ ಎನ್ಕೌಂಟರ್ ನಲ್ಲಿ ಬಲಿಯಾದ ನಂತರ ಸುಮಾರು ಒಂದೂವರೆ ದಶಕಗಳ ಕಾಲ ಬಿ.ಜಿ.ಕೃಷ್ಣಮೂರ್ತಿ ನಕ್ಸಲ್ ನಾಯಕತ್ವ ವಹಿಸಿಕೊಂಡಿದ್ದ. 2014ರ ಬಳಿಕ ಪೊಲೀಸರ ನಿರಂತರ ಕೋಂಬಿಂಗ್, ಮಲೆನಾಡಿಗರ ಬೆಂಬಲ ಕಡಿಮೆಯಾದ ಹಿನ್ನೆಲೆ ಬಿ.ಜಿ.ಕೃಷ್ಣಮೂರ್ತಿ ಸೇರಿ ಹಲವಾರು ನಕ್ಸಲರು ಕೇರಳದತ್ತ ಮುಖ ಮಾಡಿದ್ದರು. ಕಳೆದ ವರ್ಷ ಸರ್ಕಾರದ ಪ್ಯಾಕೇಜ್ ಅಡಿಯಲ್ಲಿ ಬಿ.ಜಿ.ಕೃಷ್ಣಮೂರ್ತಿ ಪೊಲೀಸರಿಗೆ ಶರಣಾಗಿದ್ದ. ಆನಂತರ 8 ಜನ ನಕ್ಸಲರು ಕರ್ನಾಟಕದಲ್ಲಿ ಶರಣಾಗತರಾಗಿದ್ದರು. 7 ಜನ ಸಿಎಂ ಮುಂದೆ ಶರಣಾಗಿದ್ದರೆ, ಓರ್ವ ಚಿಕ್ಕಮಗಳೂರು ಎಸ್ಪಿ ಮುಂದೆ ಶರಣಾಗಿದ್ದನು.