ಹೊಸದಿಗಂತ ವರದಿ ಹಾವೇರಿ:
ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ಶಿವಾನಂದ ಕುನ್ನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಬಂಧಿಸಿ ಕರೆತರುವಾಗ ಹಾನಗಲ್ಲ ತಾಲೂಕು ಕೊಂಡಜ್ಜಿ ಬಳಿ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ಶಿಗ್ಗಾವಿ ಸಿಪಿಐ ಸತ್ಯಪ್ಪ ಹಾಗೂ ಹಾನಗಲ್ ಪಿಎಸ್ ಐ ಸಂಪತ್ ಆನಿಕಿವಿ ಆತ್ಮ ರಕ್ಷಣೆಗಾಗಿ ಪ್ರಮುಖ ಆರೋಪಿಗಳಾದ ನಾಗರಾಜ ಸವದತ್ತಿ ಹಾಗೂ ಅಶ್ರಫ್ ಕಾಲಿಗೆ ಗುಂಡು ಹೊಡೆದು ಆರೋಪಿಗಳನ್ನು ವಶಕ್ಕೆ ಪಡೆದಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ.
ಇನ್ನುಳಿದ ಆರೋಪಿಗಳಾದ ಹನುಮಂತ, ಸುದೀಪ ಹಾಗೂ ಸುರೇಶ ಅವರನ್ನೂ ಸಹ ಶಿಗ್ಗಾಂವ ತಾಲೂಕಿನ ಕೋಣನಕೆರೆ ಬಳಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಹಲ್ಲೆ ವೇಳೆ ಗಾಯಗೊಂಡ ಪೊಲೀಸ ಸಿಬ್ಬಂದಿಗಳಾದ ರವಿ ಹಾಗೂ ಹರೀಶ ಅವರನ್ನು ಸಹ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಎಎಸ್ಪಿ ಎಲ್. ವೈ. ಶಿರಕೋಳ ಮಾಹಿತಿ ನೀಡಿದ್ದಾರೆ.