ವ್ಯಾಪಾರದಲ್ಲಿ ನಿರಂತರ ಶ್ರಮ ಹಾಕುತ್ತಿದ್ದರೂ ಅನ್ಕೊಂಡಂತೆ ಫಲಿತಾಂಶಗಳು ಬರ್ತಿಲ್ಲ ಅನ್ನೋ ತಲೆ ಬಿಸಿ ಇದ್ಯಾ? ಇದಕ್ಕೆ ಕಾರಣ ನಿಮ್ಮ ಕಚೇರಿ ಅಥವಾ ಅಂಗಡಿಯ ವಾಸ್ತು ದಿಕ್ಕಿನಲ್ಲಿ ಅಡಗಿರಬಹುದು. ಇದಕ್ಕೆ ಕೆಲವು ಸುಲಭ ಪರಿಹಾರಗಳನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ನಿಮ್ಮ ವ್ಯಾಪಾರದ ಕಾರ್ಯಕ್ಷಮತೆಯನ್ನು ಹೆಚ್ಚು ಮಾಡಬೇಕೆಂದರೆ ವಾಸ್ತು ಪ್ರಕಾರ ಕೆಲ ಪ್ರಮುಖ ಬದಲಾವಣೆ ಮಾಡುವುದು ಅಗತ್ಯವಾಗಿದೆ.
ಹಣದ ದಿಕ್ಕು – ಉತ್ತರ: ವ್ಯವಹಾರದ ತಿಜೋರಿ ಅಥವಾ ನಗದು ಇಡುವ ಸ್ಥಳವು ಉತ್ತರದ ದಿಕ್ಕಿನಲ್ಲಿ ಇರಬೇಕು. ಈ ದಿಕ್ಕು ‘ಕುಬೇರನ ದಿಕ್ಕು’ ಎಂದೂ ಕರೆಯಲ್ಪಡುತ್ತದೆ. ತಿಜೋರಿ ಗೋಡೆಯಿಂದ ಸ್ವಲ್ಪ ದೂರ ಇಟ್ಟು ಅದರ ಬಾಯಿ ಉತ್ತರದತ್ತ ಇರಬೇಕು.
ಬಾಗಿಲು ಹೀಗಿರಬೇಕು: ಕಚೇರಿ ಅಥವಾ ಅಂಗಡಿಯ ಮುಖ್ಯ ಬಾಗಿಲು ಸದಾ ಸ್ವಚ್ಛವಾಗಿರಬೇಕು, ಮುರಿದುಹೋದ ಅಥವಾ ಜಾಮ್ ಆಗಿರುವ ಬಾಗಿಲು ಇರಬಾರದು . ಅಲ್ಲದೆ, ಶುಭ ಸಂಕೇತ, ಮಂಗಳ ಕಲಶ, ಸ್ವಸ್ತಿಕ್ ಚಿಹ್ನೆ ಹೀಗೆ ಶುಭ ಚಿಹ್ನೆಗಳ ಬಳಕೆಯಿಂದ ಸಕಾರಾತ್ಮಕ ಶಕ್ತಿ ಹರಡುತ್ತದೆ.
ಕುಳಿತುಕೊಳ್ಳುವ ದಿಕ್ಕು: ವ್ಯಾಪಾರಸ್ಥರು ಉತ್ತರ ಅಥವಾ ಪೂರ್ವದತ್ತ ಮುಖ ಮಾಡಿ ಕುಳಿತುಕೊಳ್ಳಬೇಕು. ಇದು ಚಿಂತನೆ ಶಕ್ತಿಯನ್ನು ವೃದ್ಧಿಸಿ ನಿರ್ಧಾರಗಳನ್ನು ಸ್ಪಷ್ಟಗೊಳಿಸುತ್ತದೆ.
ಹಸಿರು ಗಿಡಗಳು: ಮನಿ ಪ್ಲಾಂಟ್, ತುಳಸಿ ಅಥವಾ ಬಿದಿರಿನ ಗಿಡಗಳು ಕಚೇರಿಗೆ ಶುಭವನ್ನು ತರುತ್ತವೆ. ಆದರೆ ಮುಳ್ಳುಗಳಿರುವ ಗಿಡಗಳನ್ನು ಇಡದಿದ್ದರೆ ಒಳಿತು.
ತಾಂತ್ರಿಕ ಸಾಧನಗಳ ಸ್ಥಳ: ಕಂಪ್ಯೂಟರ್, ಲ್ಯಾಪ್ಟಾಪ್, ಪ್ರಿಂಟರ್ಗಳನ್ನು ಆಗ್ನೇಯ ದಿಕ್ಕಿನಲ್ಲಿ ಇರಿಸುವುದು ಉತ್ತಮ. ಏಕೆಂದರೆ ಈ ದಿಕ್ಕು ಬೆಂಕಿಯ ಅಂಶದೊಂದಿಗೆ ಸಂಬಂಧಿಸಿದೆ. ಈ ದಿಕ್ಕಿನಲ್ಲಿ ಇರಿಸಲಾಗಿರುವ ಉಪಕರಣಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಕೆಲಸದಲ್ಲಿ ಯಾವುದೇ ಅಡಚಣೆಯಿಲ್ಲ.
ಸ್ವಚ್ಛತೆ ಮತ್ತು ನೈತಿಕತೆ: ವ್ಯವಹಾರದಲ್ಲಿ ಯಶಸ್ಸಿಗೆ ಶುದ್ಧತೆ ಮತ್ತು ಪ್ರಾಮಾಣಿಕತೆಯೂ ಪ್ರಮುಖ ಅಂಶಗಳು ಎಂದು ವಾಸ್ತು ಶಾಸ್ತ್ರ ತಿಳಿಸುತ್ತದೆ.