ಹೆತ್ತಮ್ಮ ಇಷ್ಟೊಂದು ಕ್ರೂರಿಯಾಗೋಕೆ ಸಾಧ್ಯಾನಾ? ಚೀಲದಲ್ಲಿ ಕಟ್ಟಿ ನವಜಾತ ಹೆಣ್ಣು ಶಿಶುವನ್ನು ಬಿಸಾಡಿ ಹೋದ ಮಹಾತಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಾಗಲಕೋಟೆ ಜಿಲ್ಲೆ ಕಲಾದಗಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪೂರ ಪುನರ್ವಸತಿ ಕೇಂದ್ರದ ಬಳಿ ಮಾನವೀಯತೆಗೂ ಮೀರಿದ ಅಮಾನವೀಯ ಘಟನೆ ನಡೆದಿದ್ದು, ಜನರಲ್ಲಿ ಆಕ್ರೋಶ ಉಂಟುಮಾಡಿದೆ. ಚೀಲದೊಳಗೆ ಹಾಕಿ ನವಜಾತ ಹೆಣ್ಣು ಶಿಶುವನ್ನು ರಸ್ತೆಬದಿಯಲ್ಲಿ ಬಿಟ್ಟುಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಮಗುವಿನ ಅಳುವಿನ ಶಬ್ದ ಕೇಳಿ ಎಚ್ಚೆತ್ತ ಸ್ಥಳೀಯರು ತಕ್ಷಣದ ಸಹಾಯಕ್ಕೆ ಧಾವಿಸಿ ಮಗುವನ್ನು ರಕ್ಷಿಸಿದ್ದಾರೆ.

ಮಗುವಿಗೆ ತಕ್ಷಣವೇ ಚಿಕಿತ್ಸೆ ನೀಡಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಹೆರಿಗೆಯ ನಂತರ ಮಗು ಹೆಣ್ಣು ಎಂಬ ವಿಚಾರ ತಿಳಿದ ತಕ್ಷಣ, ತಾಯಿಯೇ ಮಗುವನ್ನು ತ್ಯಜಿಸಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆ ಸಮಾಜದಲ್ಲಿ ಇನ್ನೂ ಹೆಣ್ಣು ಮಕ್ಕಳ ಕುರಿತಂತೆ ಬೆಳೆದು ಉಳಿದಿರುವ ತಪ್ಪು ಕಲ್ಪನೆ ಹಾಗೂ ಲಿಂಗ ತಾರತಮ್ಯದ ಚಿಹ್ನೆಯಾಗಿದೆ.

ಕಲಾದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ತ್ಯಜಿಸಿದ ವ್ಯಕ್ತಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಮಗುವಿನ ಆರೈಕೆ ಹಾಗೂ ಭವಿಷ್ಯದ ದೃಷ್ಟಿಯಿಂದ ಕಾನೂನು ಕ್ರಮ ಕೈಗೊಳ್ಳಲಿರುವುದಾಗಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!