ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಜ್ಬಾಸ್ಟನ್ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ ಮೇಲುಗೂ ಸಾಧಿಸುವಲ್ಲಿ ಯಶಸ್ವಿಯಾಗಿದೆ. ನಾಯಕ ಶುಭ್ಮನ್ ಗಿಲ್ ಬಾರಿಸಿದ ಅದ್ಭುತ ಶತಕ (261 ರನ್) ಮತ್ತು ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಅಮೂಲ್ಯ 81 ರನ್ ನೆರವಿನಿಂದ ಭಾರತವು ತನ್ನ ಮೊದಲ ಇನ್ನಿಂಗ್ಸ್ನಲ್ಲಿ 587 ರನ್ ಸಿಡಿಸಲು ಯಶಸ್ವಿಯಾಗಿದೆ.
ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಕೇವಲ 77 ರನ್ ಗಳಿಸಿದ್ದು, ಇನ್ನೂ 510 ರನ್ಗಳ ಹಿಂದೆ ಇರುವಂತಾಗಿದೆ. ಎಜ್ಬಾಸ್ಟನ್ನ ಇತಿಹಾಸದಲ್ಲೇ ಭಾರತ ಬಾರಿಸಿದ ಅತ್ಯುತ್ತಮ ಸ್ಕೋರ್ಗಳಲ್ಲಿ ಇದೊಂದು ಎನ್ನಬಹುದು.
ಇದಾದರೆ, ಈ ಪಂದ್ಯದ ಎರಡನೇ ದಿನದ ಆರಂಭಕ್ಕೂ ಮುನ್ನ ಜಡೇಜಾ ಬಿಸಿಸಿಐ ನಿಯಮ ಉಲ್ಲಂಘನೆ ಮಾಡಿರುವ ವಿಷಯವೊಂದು ಬೆಳಕಿಗೆ ಬಂದಿದೆ. ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮುನ್ನ ಬಿಸಿಸಿಐ ಸ್ಪಷ್ಟವಾಗಿ ಪ್ರಕಟಿಸಿದ್ದ ನಿಯಮಗಳ ಪೈಕಿ, ಎಲ್ಲಾ ಆಟಗಾರರು ಹೋಟೆಲ್ನಿಂದ ಸ್ಟೇಡಿಯಂಗೆ ಕಡ್ಡಾಯವಾಗಿ ತಂಡದ ಬಸ್ಸಿನಲ್ಲಿ ಪ್ರಯಾಣಿಸಬೇಕು ಎಂಬ ನಿಯಮವಿದೆ. ಆದರೆ ಜಡೇಜಾ ಈ ನಿಯಮ ಪಾಲಿಸದೇ ಪ್ರತ್ಯೇಕ ವಾಹನದಲ್ಲಿ ಸ್ಟೇಡಿಯಂಗೆ ಆಗಮಿಸಿದ್ದರು. ಭಾರತ ತಂಡದ ಆಟಗಾರರು ಮೈದಾನಕ್ಕೆ ಬರುವ ಮೊದಲೇ ಜಡ್ಡು ಬೇರೆ ವಾಹನದಲ್ಲಿ ಮೊದಲೇ ಬಂದು ನೆಟ್ಸ್ನಲ್ಲಿ ಪ್ರಾಕ್ಟೀಸ್ ಮಾಡಿದ್ದರು ಎಂಬ ಮಾಹಿತಿಯೂ ಬಂದಿದೆ.
ಈ ಎಲ್ಲಾ ಬೆಳವಣಿಗೆಯ ಮಧ್ಯೆ, ಬಿಸಿಸಿಐ ಜಡೇಜಾ ಮೇಲೆ ಕ್ರಮ ಕೈಗೊಳ್ಳುತ್ತದೆಯಾ ಅಥವಾ ಆಟಗಾರನ ತಾತ್ಕಾಲಿಕ ತೀರ್ಮಾನಕ್ಕೆ ಬೆಂಬಲ ನೀಡುತ್ತದೆಯಾ ಎಂಬ ಪ್ರಶ್ನೆ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.