ತುರ್ತು ಪರಿಸ್ಥಿತಿ ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ “ಕರಾಳ ಅಧ್ಯಾಯ”: ಮತ್ತೆ ಗುಡುಗಿದ ಶಶಿ ತರೂರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ತುರ್ತು ಪರಿಸ್ಥಿತಿಯ ಅವಧಿಯನ್ನು ಕಟುವಾಗಿ ಟೀಕಿಸುವ ಮೂಲಕ ಮತ್ತೊಮ್ಮೆ ತಮ್ಮ ಪಕ್ಷದೊಳಗೆ ವಿವಾದವನ್ನು ಹುಟ್ಟುಹಾಕಿದ್ದಾರೆ.

ಮಲಯಾಳಂ ದಿನಪತ್ರಿಕೆ ದೀಪಿಕಾದಲ್ಲಿ ಇತ್ತೀಚೆಗೆ ಪ್ರಕಟವಾದ ಶಶಿ ತರೂರ್ ಅವರ ಲೇಖನವು ವೈರಲ್ ಆಗಿದ್ದು, ಇದರಲ್ಲಿ ಶಶಿ ತರೂರ್ ತುರ್ತು ಪರಿಸ್ಥಿತಿಯನ್ನು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ “ಕರಾಳ ಅಧ್ಯಾಯ” ಎಂದು ಹೇಳಿದ್ದಾರೆ. ಆ ಸಮಯದಲ್ಲಿ ನಡೆದ ಚಿತ್ರಹಿಂಸೆ, ದೌರ್ಜನ್ಯಗಳನ್ನು ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ವಿಧಾನವು ಸಾರ್ವಜನಿಕ ಜೀವನವನ್ನು ಭಯದ ಸ್ಥಿತಿಗೆ ತಳ್ಳಿತು. ಆದರೆ, ಇಂದಿನ ಭಾರತವು 1975ರ ಭಾರತವಲ್ಲ ಎಂದು ಒತ್ತಿ ಹೇಳುವ ಮೂಲಕ ಮತ್ತೊಮ್ಮೆ ಅಂದಿನ ಕಾಂಗ್ರೆಸ್ ಸರಕಾರವನ್ನು ಟೀಕಿಸಿದ್ದಾರೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕಠಿಣ ಕ್ರಮಗಳನ್ನು ಜಾರಿಗೆ ತಂದರು. ಅವರ ಮಗ ಸಂಜಯ್ ಗಾಂಧಿ ಗ್ರಾಮೀಣ ಪ್ರದೇಶಗಳಲ್ಲಿ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ಹಿಂಸಾಚಾರ ಸೇರಿದಂತೆ ಭಯಾನಕ ದೌರ್ಜನ್ಯಗಳನ್ನು ನಡೆಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಈಗಾಗಲೇ ಕೇಂದ್ರ ಬಿಜೆಪಿ ಸರ್ಕಾರದ ಪರವಾಗಿ ಹಲವು ಬಾರಿ ಹೇಳಿಕೆಗಳನ್ನು ನೀಡುತ್ತಿರುವ ತಿರುವನಂತಪುರಂ ಸಂಸದ ಶಶಿ ತರೂರ್ ವಿರುದ್ಧ ಕಾಂಗ್ರೆಸ್​​ನಲ್ಲಿ ತೀವ್ರ ಅಸಮಾಧಾನ ಭುಗಿಲೆದ್ದಿದೆ.

50 ವರ್ಷಗಳ ನಂತರವೂ ತುರ್ತು ಪರಿಸ್ಥಿತಿಯ ಅವಧಿಯು ಭಾರತೀಯರ ನೆನಪುಗಳಲ್ಲಿ ಅಳಿಸಲಾಗದಂತೆ ಕೆತ್ತಲ್ಪಟ್ಟಿದೆ. ಆ ಅವಧಿಯು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಮೂಲಭೂತ ಖಾತರಿಗಳನ್ನು ತೀವ್ರವಾಗಿ ಪರೀಕ್ಷಿಸಿದೆ ಎಂದು ಶಶಿ ತರೂರ್ ತಮ್ಮ ಲೇಖನದಲ್ಲಿ ಬರೆದಿದ್ದಾರೆ.

ಇದೇ ವೇಳೆ ಇಂದಿರಾ ಗಾಂಧಿಯ ಮಗ ಸಂಜಯ್ ಗಾಂಧಿಯವರನ್ನು ಉಲ್ಲೇಖಿಸುತ್ತಾ ಶಶಿ ತರೂರ್, ತುರ್ತು ಪರಿಸ್ಥಿತಿಯ ಸಮಯದಲ್ಲಿ ಸಂಜಯ್ ಗಾಂಧಿಯವರ ಕ್ರಮಗಳನ್ನು “ವಿವರಿಸಲಾಗದ ಕ್ರೌರ್ಯದ ಕೃತ್ಯಗಳು” ಎಂದು ಕರೆದಿದ್ದಾರೆ. ಸಂಜಯ್ ನೇತೃತ್ವದ ಬಲವಂತದ ಸಂತಾನಹರಣ ಶಸ್ತ್ರಚಿಕಿತ್ಸೆಯ ಅಭಿಯಾನಗಳನ್ನು ಮರೆಯಲು ಸಾಧ್ಯವಿಲ್ಲ. ಗ್ರಾಮೀಣ ಭಾಗಗಳಲ್ಲಿ ಚಿತ್ರಹಿಂಸೆಯ ಮೂಲಕ ಸಂತಾನಹರಣ ನಡೆಸಲಾಯಿತು ಎಂದಿದ್ದಾರೆ.

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದಾಗ ನಾನು ಭಾರತದಲ್ಲಿಯೇ ಇದ್ದೆ. ಆದರೆ, ನಾನು ಅದಾದ ಸ್ವಲ್ಪ ಸಮಯದಲ್ಲೇ ಅಮೆರಿಕಕ್ಕೆ ಪದವಿ ಅಧ್ಯಯನಕ್ಕಾಗಿ ಹೊರಟೆ. ಉಳಿದದ್ದನ್ನು ದೂರದಿಂದಲೇ ಗಮನಿಸಿದೆ. ಆ ವೇಳೆ ನ್ಯಾಯಾಂಗವು ತುರ್ತು ಪರಿಸ್ಥಿತಿಯ ಕ್ರಮವನ್ನು ಬೆಂಬಲಿಸಲು ಅಪಾರ ಒತ್ತಡಕ್ಕೆ ಒಳಗಾಯಿತು. ಸುಪ್ರೀಂ ಕೋರ್ಟ್ ಹೇಬಿಯಸ್ ಕಾರ್ಪಸ್ ಮತ್ತು ನಾಗರಿಕರ ಮೂಲಭೂತ ಸ್ವಾತಂತ್ರ್ಯದ ಹಕ್ಕನ್ನು ಅಮಾನತುಗೊಳಿಸುವುದನ್ನು ಎತ್ತಿಹಿಡಿಯಿತು. ಪತ್ರಕರ್ತರು, ಕಾರ್ಯಕರ್ತರು ಮತ್ತು ವಿರೋಧ ಪಕ್ಷದ ನಾಯಕರು ಜೈಲಿನಲ್ಲಿದ್ದರು. ಆ ಸಮಯದಲ್ಲಿ ಆಡಳಿತವನ್ನು ಧಿಕ್ಕರಿಸಲು ಧೈರ್ಯ ಮಾಡಿದವರಿಗೆ ಕರಾಳ ಶಿಕ್ಷೆ ಎದುರಾಗುತ್ತಿತ್ತು ಎಂದು ಶಶಿ ತರೂರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!