CINE | ‘ಕೊತ್ತಲವಾಡಿ’ಗೆ ಕೌಂಟ್‌‌ ಡೌನ್‌ ಸ್ಟಾರ್ಟ್‌! ಟೈಟಲ್‌ ಟ್ರ್ಯಾಕ್ ಕೂಡ ರಿಲೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಿರ್ಮಿಸಿರುವ ‘ಕೊತ್ತಲವಾಡಿ’ ಚಿತ್ರ ಇದೀಗ ಮ್ಯೂಸಿಕ್ ಲವರ್ಸ್‌ ಗಮನ ಸೆಳೆಯುತ್ತಿದೆ. ಈ ಚಿತ್ರದ ಟೈಟಲ್ ಟ್ರ್ಯಾಕ್ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಹೆಚ್ಚು ಕುತೂಹಲ ಮೂಡಿಸಿದೆ. ಪೃಥ್ವಿ ಅಂಬಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಟೈಟಲ್ ಹಾಡಿನಲ್ಲಿ ನಾಯಕನ ಶಕ್ತಿ, ಪಾತ್ರದ ತೀವ್ರತೆಯನ್ನು ಹೈಲೈಟ್ ಮಾಡಲಾಗಿದೆ. ‘ಬೆಂಕಿ ಕಣ್ಣಿನಲ್ಲೆ ಅಚ್ಚು ಒತ್ತಿದ’ ಎಂಬ ಸಾಲುಗಳು ಈ ಹಾಡಿನ ತೀವ್ರತೆಯನ್ನು ಪ್ರತಿಬಿಂಬಿಸುತ್ತವೆ.

ಈ ಹಾಡನ್ನು ಕೆಜಿಎಫ್‌ನ ಪ್ರಸಿದ್ಧ “ಅಮ್ಮನ ಹಾಡು” ಬರೆದ ಕಿನ್ನಾಳ್ ರಾಜ್ ಬರೆದಿದ್ದು, ಈ ಬಾರಿ ಸಹ ‘ಕೊತ್ತಲವಾಡಿ’ಗೆ ಹೃದಯಸ್ಪರ್ಶಿ ಸಾಹಿತ್ಯ ನೀಡಿದ್ದಾರೆ. ಈ ಹಾಡಿಗೆ ಗಾಯಕ ವ್ಯಾಸರಾಜ್ ಸೋಸಲೆ ಧ್ವನಿ ನೀಡಿದ್ದು, ಅಭಿಮಾನಿಗಳಿಗೆ ಒಮ್ಮೆ ಕೇಳಿದ ಮೇಲೆ ಮರೆಯಲಾಗದ ರೀತಿಯ ಅನುಭವವಾಗುತ್ತದೆ. ಸಂಗೀತ ನಿರ್ದೇಶಕ ಅಭಿನಂದನ್ ಕಶ್ಯಪ್ ಅವರು ನೀಡಿರುವ ಸಂಗೀತವೂ ಹಾಡಿಗೆ ಜೀವ ನೀಡಿದೆ.

ಲಿರಿಕಲ್ ವಿಡಿಯೋ ಜೊತೆಗೆ, ಮೇಕಿಂಗ್ ವಿಡಿಯೋ ಕೂಡ ರಿಲೀಸ್ ಮಾಡಲಾಗಿದೆ. ಇದರಲ್ಲಿ ನಾಯಕ ಪೃಥ್ವಿ ಅಂಬಾರ್ ಪಾತ್ರದ ಝಲಕ್ ನೀಡಲಾಗಿದೆ. ಚಿತ್ರದಲ್ಲಿ ರಾಜೇಶ್ ನಟರಂಗ ಕೂಡ ನಟಿಸಿದ್ದು, ಅವರು ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಮೃತಧಾರೆ ಸೀರಿಯಲ್ ಮೂಲಕ ಹೆಸರು ಮಾಡಿರುವ ರಾಜೇಶ್ ಅವರ ಈ ಪಾತ್ರ ಕೂಡ ಪ್ರೇಕ್ಷಕರಲ್ಲಿ ಆಸಕ್ತಿಯನ್ನು ಹೆಚ್ಚಿಸಿದೆ.

ಈ ಚಿತ್ರವನ್ನು ಶ್ರೀರಾಜ್ ನಿರ್ದೇಶಿಸಿದ್ದಾರೆ. ‘ಕೊತ್ತಲವಾಡಿ’ ಆಗಸ್ಟ್ 1, 2025 ರಂದು ತೆರೆಕಾಣಲಿದೆ. ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಉಳಿದಿದ್ದು, ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಆರಂಭವಾಗಿದೆ. ಯಶ್ ಅವರ ತಾಯಿ ಪುಷ್ಪಾ ಈ ಸಿನಿಮಾ ಬಗ್ಗೆ ಮಾಧ್ಯಮಗಳಲ್ಲಿ ಚುರುಕಾಗಿ ಮಾತನಾಡುತ್ತಿದ್ದಾರೆ, ಅವರು ನಿರ್ಮಾಪಕರಾಗಿ ಮಾಡುತ್ತಿರುವ ಮೊದಲ ಪ್ರಯೋಗವಾಗಿರುವ ಈ ಚಿತ್ರ ಎಲ್ಲರ ದೃಷ್ಠಿಯಲ್ಲಿ ಇದೆ.

ಈ ಚಿತ್ರದಲ್ಲಿ ಪೃಥ್ವಿ ಅಂಬಾರ್ ಜೊತೆಗೆ ಕಾವ್ಯ ಶೈವ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟೀಸರ್ ಹಾಗೂ ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಎಷ್ಟಿದೆ ಎಂಬುದನ್ನು ತೋರಿಸುತ್ತಿವೆ. ಯಶ್ ಅವರ ಅಮ್ಮನ ನಿರ್ಮಾಣದ ಚಿತ್ರ ಎಂಬ ಕಾರಣಕ್ಕೆ ಈ ಚಿತ್ರಕ್ಕೆ ವಿಶೇಷ ಭಾವನೆ ಜೋಡಣೆಗೊಂಡಿದೆ. ‘ಕೊತ್ತಲವಾಡಿ’ ಶೀರ್ಷಿಕೆಗೆ ತಕ್ಕಂತೆ ಚಿತ್ರದಲ್ಲೂ ಪ್ರಬಲ ಕಥಾವಸ್ತು ಮತ್ತು ಭಾರೀ ಎಮೋಷನ್‌ಗಳ ಮಿಶ್ರಣವಿರುವ ನಿರೀಕ್ಷೆಯಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!