ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ ಗಢದ ನಾರಾಯಣಪುರ ಜಿಲ್ಲೆಯಲ್ಲಿ 22 ನಕ್ಸಲೀಯರು ಪೊಲೀಸರಿಗೆ ಇಂದು ಶರಣಾಗಿದ್ದಾರೆ. ಇವರಿಗೆ ರೂ. 37.5 ಲಕ್ಷ ಬಹಮಾನ ಘೋಷಿಸಲಾಗಿತ್ತು .
ಮಾವೋವಾದಿಗಳ ಮಾದ್ ವಿಭಾಗದ ಕುತುಲ್, ನೆಲ್ನಾರ್ ಮತ್ತು ಇಂದ್ರಾವತಿ ಪ್ರದೇಶ ಸಮಿತಿಗಳಿಗೆ ಸೇರಿದ ನಕ್ಸಲೀಯರು ಹಿರಿಯ ಪೊಲೀಸ್, ಗಡಿ ಭದ್ರತಾ ಪಡೆ (ಬಿಎಸ್ಎಫ್) ಮತ್ತು ಐಟಿಬಿಪಿ ಅಧಿಕಾರಿಗಳ ಮುಂದೆ ನಾರಾಯಣಪುರದಲ್ಲಿ ಶರಣಾದರು.
ಕ್ಷೀಪ್ರಗತಿಯಲ್ಲಿ ರಸ್ತೆ ಕಾಮಗಾರಿ ಸೇರಿದಂತೆ ಮಾದ್ ಪ್ರದೇಶದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಿತರಾಗಿ ಸಹಜ ಜೀವನ ನಡೆಸಲು ಬಯಸಿದ್ದರು. ಈ ಎಲ್ಲಾ 22 ನಕ್ಸಲೀಯರಿಗೆ ಒಟ್ಟು ರೂ. 37.5 ಲಕ್ಷ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಬಿನ್ಸನ್ ಗುರಿಯಾ ವಿವರ ನೀಡಿದ್ದಾರೆ.
ನಕ್ಸಲೀಯರ ಶರಣಾಗತಿಯಲ್ಲಿ ಜಿಲ್ಲಾ ಪೊಲೀಸರು, ಮೀಸಲು ದಳ, ಐಟಿಬಿಪಿ ಮತ್ತು ಬಿಎಸ್ ಎಫ್ ಪ್ರಮುಖ ಪಾತ್ರ ವಹಿಸಿದೆ. ಇದರಿಂದ ನಕ್ಸಲ್ ಮುಕ್ತ ಸಂಕಲ್ಪ ಈಡೇರುವ ಕಾಲ ಹತ್ತಿರವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಶರಣಾದ ಎಲ್ಲಾ ನಕ್ಸಲೀಯರಿಗೂ ರೂ. 50,000 ಆರ್ಥಿಕ ನೆರವನ್ನು ಒದಗಿಸಲಾಗುವುದು. ಇದರೊಂದಿಗೆ ಈ ವರ್ಷ ಇಲ್ಲಿಯವರೆಗೂ 132 ನಕ್ಸಲೀಯರು ಶರಣಾಗಿದ್ದಾರೆ ಎಂದು ಗುರಿಯಾ ತಿಳಿಸಿದ್ದಾರೆ.