ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಾದ್ಯಂತ ತೀವ್ರ ಚರ್ಚೆಗೂ ಕಾರಣವಾದ ಅಹಮದಾಬಾದ್ ಏರ್ ಇಂಡಿಯಾ ವಿಮಾನ ದುರಂತದ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಅಪಘಾತದ ನಿಖರ ಕಾರಣಗಳತ್ತ ಬೆಳಕು ಚೆಲ್ಲಿದೆ. 260ಕ್ಕೂ ಹೆಚ್ಚು ಜನರ ಜೀವ ಬಲಿ ತೆಗೆದುಕೊಂಡ ಈ ಭೀಕರ ಘಟನೆಯ ವರದಿ 15 ಪುಟಗಳಲ್ಲಿ ಸಾದರಪಡಿಸಲಾಗಿದೆ.
ಬೋಯಿಂಗ್ 787 ಡ್ರೀಮ್ಲೈನರ್ ವಿಮಾನವು ಟೇಕ್ ಆಫ್ ಆದ ಮೂರು ಸೆಕೆಂಡುಗಳ ನಂತರ ಎರಡು ಎಂಜಿನ್ಗಳ ಫ್ಯೂಯಲ್ ಕಂಟ್ರೋಲ್ ಸ್ವಿಚ್ಗಳು “ರನ್”ನಿಂದ “ಕಟ್ ಆಫ್”ಗೆ ಬದಲಾಗಿದ್ದವು. ಇದರಿಂದ ಥ್ರಸ್ಟ್ (Thrust) ತೀವ್ರವಾಗಿ ಕುಸಿದಿದ್ದು, ವಿಮಾನವು ಗಾಳಿಯಲ್ಲಿ ಸ್ಥಿರವಾಗಿ ಇರಲು ಸಾಧ್ಯವಾಗಲಿಲ್ಲ. cockpit ಧ್ವನಿ ರೆಕಾರ್ಡಿಂಗ್ನ ಪ್ರಕಾರ, ಪೈಲಟ್ಗಳಲ್ಲಿ ಒಬ್ಬರು “ನೀವು ಏಕೆ ಕಟ್ ಆಫ್ ಮಾಡಿದ್ರಿ?” ಎಂಬ ಪ್ರಶ್ನೆ ಕೇಳಿದರೆ, ಮತ್ತೊಬ್ಬರು “ನಾನು ಮಾಡಿಲ್ಲ” ಎಂದು ಪ್ರತಿಕ್ರಿಯಿಸುತ್ತಿರುವುದು ದಾಖಲಾಗಿದೆ. ಈ ಸಂದಭ೯ದಿಂದ ತಾಂತ್ರಿಕ ದೋಷ ಅಥವಾ ಆಕಸ್ಮಿಕ ಸ್ವಿಚ್ ಆಫ್ ಆಗಿರಬಹುದೆಂಬ ಶಂಕೆ ಮೂಡಿದೆ.
ಫ್ಲೈಟ್ ಡೇಟಾ ರೆಕಾರ್ಡರ್ ಪ್ರಕಾರ, ವಿಮಾನದಲ್ಲಿ ಇಂಜಿನ್-1 ಅನ್ನು ಮರುಪ್ರಾರಂಭಿಸಲು ಯಶಸ್ವಿಯಾಗಿದ್ದು, ಇಂಜಿನ್-2 ಮಾತ್ರ ಮರುಪ್ರಾರಂಭವಾಗಲಿಲ್ಲ. ಈ ಸಂದರ್ಭದಲ್ಲೇ ವಿಮಾನವು ತುರ್ತು ವಿದ್ಯುತ್ ಮೂಲವಾಗಿ ರಾಮ್ ಏರ್ ಟರ್ಬೈನ್ (RAT) ಬಳಸಿತು. RAT ತಂತ್ರಜ್ಞಾನವು ಎಂಜಿನ್ಗಳ ಬದಲಾಗಿ ಎಲೆಕ್ಟ್ರಿಕಲ್ ಸಿಸ್ಟಮ್ಗಳಿಗೆ ವಿದ್ಯುತ್ ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಆದರೆ ಈ ವೇಳೆ ಹಲವಾರು ವ್ಯವಸ್ಥೆಗಳು ಸ್ಥಗಿತಗೊಂಡಿದ್ದರಿಂದ ನಿಯಂತ್ರಣ ಸಂಪೂರ್ಣವಾಗಿ ಕಳೆದುಹೋಯಿತೆಂಬುದು ವರದಿಯಿಂದ ಸ್ಪಷ್ಟವಾಗಿದೆ.
ಮೇ ಡೇ ಕರೆ: ಪೈಲಟ್ನಿಂದ ತುರ್ತು ಸಂದೇಶ
ದುರಂತದ ಕೆಲವೇ ಕ್ಷಣಗಳ ಮೊದಲು, ವಿಮಾನ ನಾಶವಾಗುವ ಸಮಯವಾದ 08:09:05 UTCಗೆ ಪೈಲಟ್ಗಳು “May Day” ಎಂಬ ತುರ್ತು ಕರೆ ನೀಡಿದ್ದರು. ಆದರೆ ಈ ಸಮಯದಲ್ಲಿ ವಿಮಾನವು ಏರ್ಪೋರ್ಟ್ ಹೊರಗಿನ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಸಂಪೂರ್ಣ ನಾಶವಾಗಿತ್ತು.
ಈ ದುರಂತವು ಜುಲೈ 12ರಂದು ಅಹಮದಾಬಾದ್ ಏರ್ಪೋರ್ಟ್ ಬಳಿ ಸಂಭವಿಸಿದ್ದು, 260ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿ ತಮ್ಮ ಜೀವವನ್ನು ಕಳೆದುಕೊಂಡರು. ಈ ಭೀಕರ ಘಟನೆಗೆ ಕಾರಣವಾಗಿ ಎಂಜಿನ್ ವೈಫಲ್ಯ, ತಾಂತ್ರಿಕ ದೋಷ, ಹಾಗೂ ತುರ್ತು ಸಿಸ್ಟಮ್ಗಳ ಕಾರ್ಯಕ್ಷಮತೆಯ ಕೊರತೆ ಎನ್ನಲಾಗುತ್ತಿದೆ.
ವಿಮಾನ ಅಪಘಾತ ತನಿಖಾ ಬ್ಯೂರೋ ಮುಂದಿನ ಹಂತದಲ್ಲಿ ಸಂಪೂರ್ಣ ತಾಂತ್ರಿಕ ವಿಶ್ಲೇಷಣೆ ಹಾಗೂ ನಿಖರ ಕಾರಣಗಳ ಮೇಲೆ ಅಂತಿಮ ವರದಿ ಹೊರತರುವ ನಿರೀಕ್ಷೆಯಿದೆ.