ಹೊಸದಿಗಂತ ವರದಿ, ಕಾರವಾರ:
ಇತ್ತೀಚೆಗೆ ಭಟ್ಕಳ ನಗರವನ್ನು ಸ್ಪೋಟಿಸುವುದಾಗಿ ಭಟ್ಕಳ ಪೊಲೀಸ್ ಠಾಣೆಗೆ ಈ ಮೇಲ್ ಸಂದೇಶ ಕಳುಹಿಸಿರುವ ಆರೋಪಿಯನ್ನು ಉತ್ತರ ಕನ್ನಡ ಜಿಲ್ಲೆಯ ವಿಶೇಷ ಪೊಲೀಸರ ತಂಡ ವಶಕ್ಕೆ ಪಡೆದಿದ್ದು ಆರೋಪಿತನ ಮೇಲೆ ರಾಷ್ಟ್ರದ ವಿವಿಧ ಭಾಗಗಳಲ್ಲಿ ಇದೇ ರೀತಿ ಹುಸಿ ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಸುಮಾರು 15 ಪ್ರಕರಣಗಳು ದಾಖಲಾಗಿರುವುದು ಬೆಳಕಿಗೆ ಬಂದಿದೆ.
ಪೊಲೀಸ್ ತನಿಖೆಗಾಗಿ ಹಲವು ಪೊಲೀಸ್ ಠಾಣೆಗಳಿಗೆ ಅತಿಥಿಯಾಗುತ್ತಿರುವ ಆರೋಪಿತನನ್ನು ದೆಹಲಿಯ ಪಟೇಲನಗರ, ಬೆಲಜತನಗರ ನಿವಾಸಿ ನಿತಿನ್ ಶರ್ಮಾ ಅಲಿಯಾಸ್ ಖಾಲೀದ್ ಎಂದು ಗುರುತಿಸಲಾಗಿದ್ದು ಈತ ಈ ಹಿಂದೆ ಉತ್ತರಾಖಂಡದ ನೈನಿತಾಲ್ ನಗರವನ್ನು ಸ್ಪೋಟಿಸುವುದಾಗಿ ಬೆದರಿಕೆ ಹಾಕಿರುವ ಕಾರಣ ಬಂಧಿಸಲ್ಪಟ್ಟು ನ್ಯಾಯಾಲಯದಿಂದ 8 ತಿಂಗಳ ಶಿಕ್ಷೆಗೆ ಗುರಿಯಾಗಿದ್ದ.
ಆರೋಪಿತ ಮೇಲೆ ಈಗಾಗಲೇ ಕೇರಳ ರಾಜ್ಯದಲ್ಲಿ 6, ದೆಹಲಿಯಲ್ಲಿ 1, ಮಧ್ಯಪ್ರದೇಶಲ್ಲಿ 1, ಪುದುಚೆರಿಯಲ್ಲಿ 2, ಉತ್ತರಾಖಂಡದಲ್ಲಿ 1, ಓಡಿಸ್ಸಾ1, ಆಂಧ್ರಪ್ರದೇಶ 1 ಮತ್ತು ಕರ್ನಾಟಕದಲ್ಲಿ 3 ಪ್ರಕರಣಗಳು ದಾಖಲಾಗಿವೆ. ಜುಲೈ 6 ರಂದು ಮೈಸೂರು ಪೊಲೀಸರಿಂದ ಬಂಧಿಸಲ್ಪಟ್ಟು ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿರುವ ಆರೋಪಿತನನ್ನು ಜುಲೈ 10 ರಂದು ವಿಚಾರಣೆಗಾಗ ಕೇರಳದ ಮುನ್ನಾರ ಪೊಲೀಸರು ಬಾಡಿ ವಾರೆಂಟ್ ಮೇಲೆ ಕರೆದುಕೊಂಡು ಹೋಗಿದ್ದರು. ಅದೇ ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ವಿಚಾರಣೆಗೆ ಬಂದಿದ್ದ ತಮಿಳುನಾಡು ತೇನಿಯ ತಿರುಮಲಾಪುರಂ ನಿವಾಸಿ ಕನ್ನನ್ ಗುರುಸ್ವಾಮಿ ಎನ್ನುವವರ ಜೊತೆ ಪರಿಚಯ ಮಾಡಿಕೊಂಡ ಆರೋಪಿತ ಇಂಗ್ಲಿಷ್, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ಮಾತನಾಡಿ ಮನೆಗೆ ತುರ್ತು ಕರೆ ಮಾಡಬೇಕು ಎಂದು ತಿಳಿಸಿ ಮೊಬೈಲ್ ಪಡೆದುಕೊಂಡು ಜುಲೈ 10 ರಂದು ಬೆಳಿಗ್ಗೆ 7 ಗಂಟೆಯಿಂದ 7.30 ರ ಸಮಯದಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ಈ ಮೇಲ್ ಸಂದೇಶ ಕಳುಹಿಸಿರುವುದಾಗಿ ತಿಳಿದು ಬಂದಿದೆ.
ಕಣ್ಣನ್ ಗುರುಸ್ವಾಮಿ ಮೊಬೈಲ್ ಪೋನ್ ಮೂಲಕ ಈ ಮೇಲ್ ಸಂದೇಶ ಬಂದ ನಂತರ ಆ ಕುರಿತು ತನಿಖೆಗಿಳಿದ ಪೊಲೀಸರ ತಂಡ ತಮಿಳುನಾಡಿಗೆ ತೆರಳಿ ಅಲ್ಲಿ ಕನ್ನನ್ ಗುರುಸ್ವಾಮಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು ನಂತರ ಕೇರಳದ ಮುನ್ನಾರ ಪೊಲೀಸ್ ಠಾಣೆಗೆ ತೆರಳಿ ಆರೋಪಿತ ಕುರಿತು ಮಾಹಿತಿ ಸಂಗ್ರಹಿಸಿ ಮೈಸೂರಿನ ಕೇಂದ್ರ ಕಾರಾಗೃಹದಿಂದ ಬಾಡಿ ವಾರೆಂಟ್ ಮೇರೆಗೆ ಭಟ್ಕಳಕ್ಕೆ ಕರೆ ತಂದಿದ್ದಾರೆ.
ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠ ಎಂ.ನಾರಾಯಣ, ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಎಂ.ಕೃಷ್ಣಮೂರ್ತಿ, ಎಂ.ಜಗದೀಶ ಡಿ.ವೈ.ಎಸ್.ಪಿ ಎಂ.ಮಹೇಶ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ದಿವಾಕರ್ ಅವರ ನೇತೃತ್ವದಲ್ಲಿ ಪಿ.ಎಸ್.ಐ ನವೀನ ನಾಯ್ಕ, ಸೋಮರಾಜ ರಾಥೋಡ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದು ತನಿಖೆ ಮುಂದುವರೆದಿದೆ.