ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರಸನ ಅರಮನೆಗೆ ಕಾರ್ಮೋಡ ಕವಿದೀತು, ಜಗತ್ತೇ ತಿರುಗಿನೋಡುವಂತಹ ಆಘಾತ ಭಾರತಕ್ಕಾಗಲಿದೆ ಎಂದು ಕೋಡಿಮಠ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಸ್ಪೋಟಕವಾದ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿರುವವರಿಗೆ ಮುಂದಿನ ದಿನಗಳಲ್ಲಿ ತೊಂದರೆ ಎದುರಾಗಲಿದೆ ಎಂದು ಹೇಳಿದರು. ಮುಂದಾಗುವ ಸಮಸ್ಯೆಗಳನ್ನು ಅರಿತುಕೊಂಡು ಈಗಲೇ ಪರಿಹಾರ ಮಾಡಿಕೊಂಡರೆ ಸೂಕ್ತ. ಇಲ್ಲವಾದಲ್ಲಿ ಸಮಸ್ಯೆ ಇದೆ ಎಂದು ಅವರು ಹೇಳಿದ್ದಾರೆ.
ಯುಗಾದಿ ನಂತರ ಮಳೆ, ಬೆಳೆ ಬಗ್ಗೆ ನಿರ್ಧಾರ ಆಗುತ್ತದೆ. ಸಂಕ್ರಾಂತಿಯಲ್ಲಿ ರಾಜ್ಯಕ್ಕೆ ಮತ್ತು ದೊಡ್ಡ ದೊಡ್ಡ ವ್ಯಾಪಾರಸ್ಥರಿಗೆ ಇಂಥಹ ವ್ಯಾವಹಾರಿಕ ವಿಷಯಗಳು ಬರುತ್ತವೆ. ಹೀಗಾಗಿ ಸಂಕ್ರಾಂತಿವರೆಗೆ ಏನೂ ತೊಂದರೆ ಇಲ್ಲ. ಆಮೇಲೆ, ಅರಸನ ಅರಮನೆಗೆ ಕಾರ್ಮೋಡ ಕವಿದೀತು ಎಂದು ಕೊಡಿ ಶ್ರೀ ಹೇಳಿದರು.
ಯುದ್ಧಗಳು ಮುಂದುವರಿಯಲಿವೆ. ಮನಸುಗಳು ನಿಂತಾಗ ಮಾತ್ರ ಯುದ್ಧ ನಿಲ್ಲುತ್ತದೆ. ಮನುಷ್ಯ ಮೌನವಾಗಿದ್ದರೆ ಹೆಚ್ಚು ಜ್ಞಾನ ಸಂಪಾದನೆ ಮಾಡಬಹುದು. 84 ಲಕ್ಷ ಜೀವ ರಾಶಿಗಳಲ್ಲಿ ಆತ್ಮ ಕಡೆಯದಾಗಿದ್ದು, ಮಾನವನಿಗೆ ಜ್ಞಾನ ಹಾಗೂ ವಿವೇಕ ನೀಡಲಾಗಿದೆ. ಇದನ್ನು ಸನ್ಮಾರ್ಗದಲ್ಲಿ ಬಳಸಿಕೊಂಡಾಗ ಮೋಕ್ಷ ಪ್ರಾಪ್ತಿಯಾಗುತ್ತದೆ. ಧ್ಯಾನ ಕೇಂದ್ರಗಳು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಬೆಳವಣಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಪ್ರಕೃತಿ ಹಾಗೂ ವೃಕ್ಷಗಳಿಗೆ ತನ್ನದೇ ಆದ ಅಘಾದ ಶಕ್ತಿ ಇದೆ. ಪಂಚತಂತ್ರ ವೃಕ್ಷಗಳಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆಯಾಗುತ್ತದೆ. ಅವು ದೈವ ವೃಕ್ಷಗಳಾಗಿವೆ ಎಂದು ಸ್ವಾಮೀಜಿ ಹೇಳಿದರು.