ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ವಾಹನಗಳ ಮೇಲೆ ರಾಷ್ಟ್ರ ಧ್ವಜ ಅಥವಾ ಚಿಹ್ನೆಗಳನ್ನು ಬಳಕೆ ಮಾಡಿದರೆ ಕೂಡಲೇ ಜಪ್ತಿ ಮಾಡಿಕೊಂಡು, ದಂಡ ವಸೂಲಿ ಮಾಡುವಂತೆ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.
ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನನ್ವಯ ಮಹತ್ವವಾದ ಚಿಹ್ನೆಗಳು, ಧ್ವಜಗಳು, ಹೆಸರುಗಳು ಮತ್ತು ಲೋಗೋಗಳು, ಲಾಂಛನಗಳು ಹಾಗೂ ಮೊಹರುಗಳ ಅನಧಿಕೃತ ದುರ್ಬಳಕೆಯನ್ನು ತಡೆಯಲು ಹಲವು ನಿರ್ದೇಶನಗಳನ್ನು ನೀಡಿದೆ.
ಈ ತೀರ್ಪಿನ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು 16.06.2025 ರಂದು ಹಾಗೂ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು 18.06.2025 ರಂದು ರಾಜ್ಯ ಸರ್ಕಾರಗಳಿಗೆ ಸೂಚನೆಗಳನ್ನು ನೀಡಿದ್ದು, ಅದರಂತೆ ಎಲ್ಲಾ ಇಲಾಖೆಗಳು, ಇಲಾಖೆಗಳ ಅಧೀನದಲ್ಲಿ ಬರುವ ಕ್ಷೇತ್ರ ಇಲಾಖೆಗಳು, ನಿಗಮ ,ಮಂಡಳಿಗಳು, ಸ್ವಾಯತ್ತ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ,ಆಯೋಗಗಳು ಹಾಗೂ ಇತ್ಯಾದಿ ಸಂಘ ಸಂಸ್ಥೆಗಳು ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನ ಪಾಲನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
ಇಲಾಖೆಗಳು ತಮ್ಮ ಅಧೀನದಲ್ಲಿ ಬರುವ ಎಲ್ಲಾ ಅನುಷ್ಠಾನಗೊಳಿಸುವ ಅಧಿಕಾರಿಗಳಿಗೆ ನಿಯಮಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆ ಸೂಚಿಸಿದೆ.
ಅನಧಿಕೃತವಾಗಿ ಬಳಸುತ್ತಿರುವ ಎಲ್ಲಾ ರೀತಿಯ ಬಾವುಟಗಳು, ಲಾಂಛನಗಳು, ಹೆಸರುಗಳು, ಲೋಗೊಗಳು, ಮೊಹರುಗಳು, ಸ್ಪೀಕರ್ ಗಳನ್ನು ನಾಲ್ಕು ವಾರಗಳ ಒಳಗಾಗಿ ತೆರವುಗೊಳಿಸುವುದು. ದೃಶ್ಯ ಹಾಗೂ ಮುದ್ರಣ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವುದು.
ರಾಷ್ಟ್ರ ಲಾಂಛನ ಹಾಗೂ ರಾಷ್ಟ್ರೀಯ ಚಿಹ್ನೆಗಳನ್ನು ಅನಧಿಕೃತವಾಗಿ ಬಳಸುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ .
ರಾಷ್ಟ್ರ ಲಾಂಛನ ಹಾಗೂ ರಾಷ್ಟ್ರೀಯ ಚಿಹ್ನೆಗಳ ದುರುಪಯೋಗದ ಕುರಿತು ಬರುವ ದೂರುಗಳು ಸರಿಯಾಗಿರುವುದೆಂದು ಕಂಡುಬಂದಲ್ಲಿ ಅನುಷ್ಠಾನಗೊಳಿಸುವ ಅಧಿಕಾರಿಗಳು ಸೂಕ್ತ ಕಾಯ್ದೆ ಹಾಗೂ ನಿಯಮಗಳನ್ವಯ ಪ್ರಕರಣಗಳನ್ನು ದಾಖಲಿಸುವಂತೆ ಸೂಚನೆ ನೀಡಬೇಕು. ಈ ಕುರಿತಾಗಿ ಅವಶ್ಯಕ ಸುತ್ತೋಲೆಗಳನ್ನು ಹೊರಡಿಸಬೇಕು.
ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಯಿಂದ ರಾಷ್ಟ್ರದ ಚಿಹ್ನೆಗಳು ಹಾಗೂ ಲಾಂಛನಗಳ ದುರ್ಬಳಕೆ ಹಾಗೂ ಅನಧಿಕೃತ ಬಳಕೆಯಾಗದಂತೆ ಶಾಲಾ ವಿದ್ಯಾರ್ಥಿಗಳು ಅಥವಾ ಕಾನೂನು ವಿದ್ಯಾರ್ಥಿಗಳನ್ನು ಒಗ್ಗೂಡಿಸಿಕೊಂಡು ಜಾಗೃತಿ ಮೂಡಿಸುವುದು.
ರಾಷ್ಟ್ರೀಯ ಲಾಂಛನಗಳು ಹಾಗೂ ಚಿಹ್ನೆಗಳ ಬಳಕೆಗೆ ಸಂಬಂಧಿಸಿದ ಕಾಯ್ದೆಗಳ ಉಲ್ಲಂಘನೆಗೆ ದಂಡ ವಿಧಿಸುವ ಹಾಗೂ ಚಾಲನಾ ಪರವಾನಗಿ ರದ್ದುಗೊಳಿಸುವಂತಹ ನಿಯಮಗಳನ್ನು ಸಂಬಂಧಿಸಿದ ನಿಯಮಗಳಲ್ಲಿ ಅಳವಡಿಸುವುದು. ಸಂಚಾರಿ ಪೊಲೀಸರಿಗೆ ಈ ರೀತಿಯ ಉಲ್ಲಂಘನೆಗಳ ಕುರಿತು ನಿಗಾವಹಿಸುವಂತೆ ಹಾಗೂ ಉಲ್ಲಂಘನೆಗೆ ದಂಡನಾತ್ಮಕ ಕ್ರಮ ತೆಗೆದುಕೊಳ್ಳಲು ಸೂಕ್ತ ಕಾರ್ಯಕ್ರಮಗಳು ಹಾಗೂ ತರಬೇತಿಯ ಮೂಲಕ ಶಿಕ್ಷಣ ನೀಡುವಂತೆ ಕ್ರಮವಹಿಸಲು ಸೂಚಿಸಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪಿನ ಹಾಗೂ ಕಾಯ್ದೆ / ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜಕೀಯ) ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.