ಹೊಸದಿಗಂತ ಡಿಜಿಟಲ್ ಡೆಸ್ಕ್:
ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಮೊದಲ ಇನಿಂಗ್ಸ್ನ ಸಂದರ್ಭದಲ್ಲೇ ಕ್ರಿಸ್ ವೋಕ್ಸ್ ಎಸೆದ ಚೆಂಡು ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರ ಬಲಗಾಲಿಗೆ ಬಡಿದು ಗಂಭೀರವಾಗಿ ಗಾಯವಾಗಿದೆ. ಈ ಗಾಯದ ತೀವ್ರತೆಗೆ ಪಂತ್ ತಕ್ಷಣವೇ ಬ್ಯಾಟಿಂಗ್ ನಿಲ್ಲಿಸಿ ಮೈದಾನ ತೊರೆದಿದ್ದಾರೆ.
ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ, ರಿಷಭ್ ಪಂತ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಕಾರಣದಿಂದಾಗಿ ಅವರು ಮುಂದಿನ pandya ಆಡದಿರುವ ಸಾಧ್ಯತೆ ಹೆಚ್ಚಾಗಿದೆ. ಇವರ ಬದಲಿಗೆ ಯುವ ವಿಕೆಟ್ ಕೀಪರ್ ಧ್ರುವ್ ಜುರೇಲ್ ಕಣಕ್ಕಿಳಿಯುವ ಸಾಧ್ಯತೆ ಇದ್ದರೂ, ಐಸಿಸಿ ನಿಯಮದಂತೆ ಅವರಿಗೆ ಬ್ಯಾಟಿಂಗ್ಗೆ ಅವಕಾಶವಿಲ್ಲ.
ಐಸಿಸಿ ರೂಪಿಸಿರುವ ಕನ್ಕ್ಯುಶನ್ ಸಬ್ ನಿಯಮ ಪ್ರಕಾರ, ಆಟಗಾರನ ತಲೆಯ ಭಾಗ ಅಥವಾ ಕುತ್ತಿಗೆಗೆ ಗಾಯವಾದರೆ ಮಾತ್ರ ಬದಲಿಗೆ ಆಟಗಾರನನ್ನು ಕಣಕ್ಕಿಳಿಸಬಹುದಾಗಿದೆ. ಆದರೆ ಇತರ ಯಾವುದೇ ಅಂಗಗಳಿಗೆ ಗಾಯವಾದರೆ ಬದಲಿ ಆಟಗಾರ ಆಯ್ಕೆ ಮಾಡಿಕೊಳ್ಳಲಾಗದು ಎಂಬ ನಿಯಮವಿದೆ. ಈ ನಿಯಮದದಿಂದಲೇ ಟೀಮ್ ಇಂಡಿಯಾ ಸಂಕಷ್ಟಕ್ಕೀಡಾಗಿದೆ.
ಈ ಘಟನೆ ಆಟದ ನಿಯಮಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ. ಮ್ಯಾಚ್ ಮಧ್ಯೆ ತೀವ್ರವಾಗಿ ಗಾಯಗೊಂಡಿದ್ದರೂ, ಬ್ಯಾಟಿಂಗ್ಗೆ ಬದಲಿ ಆಯ್ಕೆ ಇಲ್ಲದಿರುವುದು ತಂಡದ ಸಾಮರ್ಥ್ಯವನ್ನು ಪರಿಣಾಮಪಡಿಸುತ್ತದೆ ಎಂಬ ಅಂಶ ಚರ್ಚೆಯಲ್ಲಿದೆ. 2024 ರ ಲಾರ್ಡ್ಸ್ ಟೆಸ್ಟ್ ವೇಳೆ ಇಂಗ್ಲೆಂಡ್ ಆಟಗಾರ ಶೊಯೆಬ್ ಬಶೀರ್ ಅವರ ಕೈಗೆ ಗಾಯವಾಗಿದ್ದರೂ ಅವರು ಆಟ ಮುಂದುವರೆಸಿದ್ದರು. ಈಗ ಪಂತ್ನ ಗಾಯದ ಮೂಲಕ ಇದೇ ನಿಯಮ ಮತ್ತೆ ಟೀಕೆಗೀಡಾಗಿದೆ.
ಪಂತ್ ಪಂದ್ಯದಿಂದ ಹೊರಗುಳಿದರೆ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ ಕೇವಲ 10 ಬ್ಯಾಟರ್ಗಳೊಂದಿಗೆ ಆಡಬೇಕಾಗುವುದು ನಿಶ್ಚಿತ. ಈ ಬೆನ್ನಲ್ಲೇ ಐಸಿಸಿ ತನ್ನ ಕನ್ಕ್ಯುಶನ್ ಸಬ್ ನಿಯಮದಲ್ಲಿ ಬದಲಾವಣೆ ತರಬೇಕೆಂಬ ಕೂಗು ಮತ್ತೆ ಕೇಳಿಬರುತ್ತಿದೆ.