ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರದಲ್ಲಿ ಇನ್ನೂ ಮೂರು ವರ್ಷವಿದ್ದು, ಈ ಅವಧಿಯಲ್ಲಿ ಸಾಧ್ಯವಾದಷ್ಟು ಲೂಟಿ ಮತ್ತು ಭ್ರಷ್ಟಾಚಾರ ನಡೆಸಿ ಮುಂದಿನ ಚುನಾವಣೆಗೆ ಹಣ ಜಮೆ ಮಾಡಬೇಕೆಂಬ ನಿಟ್ಟಿನಲ್ಲಿ ಅವರು ಕೆಲಸ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಡಿದ್ದಾರೆ.
ಪಟ್ಟಣದ ಸಮೀಪದ ಹಲಸೂರು ಶ್ರೀರಾಮ ಎಸ್ಟೇಟಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಸಾಧನಾ ಸಮಾವೇಶದ ಬೆನ್ನಲ್ಲೆ, “ಇವರ ಸಾಧನೆ ಏನು?” ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ರಾಜ್ಯದ ಜನತೆ ನೀಡಿದ ಭಾರಿ ಬಹುಮತಕ್ಕೆ ತಕ್ಕಷ್ಟು ಅಭಿವೃದ್ಧಿ ಕೆಲಸವಾಗಿಲ್ಲವೆಂಬ ಎಂದರು.
ರಾಜ್ಯದ ಜನತೆ 130ಕ್ಕೂ ಹೆಚ್ಚು ಸೀಟುಗಳನ್ನು ನೀಡಿದ್ದರೂ, ಅದಕ್ಕೆ ತಕ್ಕಷ್ಟು ಕೆಲಸವಾಗಿಲ್ಲ ಎಂಬುದು ಸ್ಪಷ್ಟ. ಅವರು ಮಾಡಿದ ಸಾಧನೆಗಳ ಬಗ್ಗೆ ತಾವು ಬಗೆಹರಿಸಬೇಕಾದ ಉತ್ತರವನ್ನು ಬೇರೆ ಯಾರಾದರೂ ನೀಡುವ ಅಗತ್ಯವಿಲ್ಲ ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ನಡುವಿನ ಅಧಿಕಾರ ಕಿತ್ತಾಟವನ್ನೂ ಟೀಕಿಸಿದರು. “ಮುಖ್ಯಮಂತ್ರಿ ತನ್ನ ಸ್ಥಾನ ಉಳಿಸಿಕೊಳ್ಳಲು ಕಾಲಹರಣ ಮಾಡುತ್ತಿದ್ದಾರೆ. ಉಪಮುಖ್ಯಮಂತ್ರಿ ಅವರ ಸ್ಥಾನಕ್ಕೇ ಕಣ್ಣು ಹಾಕಿದ್ದಾರೆ. ಆವರವರ ಸ್ಥಾನ ಉಳಿಸಿಕೊಳ್ಳುವ ಲಾಬಿಗಳಲ್ಲಿ ಜನರ ಸಮಸ್ಯೆಗಳು ಮರೆತುಹೋಗಿವೆ” ಎಂದು ಕಟುವಾಗಿ ವ್ಯಂಗ್ಯವಾಡಿದರು.