ಹೊಸದಿಗಂತ ಡಿಜಿಟಲ್ ಡೆಸ್ಕ್:
ಭೀಮನ ಅಮಾವಾಸ್ಯೆ ಸಂದರ್ಭ ಗಂಡನಿಗೆ ಪೂಜೆ ಸಲ್ಲಿಸಿದ ತಕ್ಷಣವೇ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದಾರುಣ ಘಟನೆ ಬೆಂಗಳೂರು ಹೊರವಲಯದ ದಾಸನಪುರದ ಅಂಚೆಪಾಳ್ಯದಲ್ಲಿ ನಡೆದಿದೆ.
ಮರಣಹೊಂದಿದ ಯುವತಿಯು ಸ್ಪಂದನಾ (24) ಎಂದು ಗುರುತಿಸಲಾಗಿದೆ. 2024ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಸ್ಪಂದನಾ ಹಾಗೂ ಅಭಿಷೇಕ್ ದಂಪತಿ ಕಳೆದ ಕೆಲ ತಿಂಗಳಿಂದ ಅಂಚೆಪಾಳ್ಯದಲ್ಲಿ ವಾಸವಿದ್ದರು. ಬೆಂಗಳೂರಿನ ಕಾಲೇಜಿನಲ್ಲಿ ಪಿಜಿ ಓದುವಾಗ ಈ ಜೋಡಿಗೆ ಪರಿಚಯವಾಗಿದ್ದು, ನಂತರ ಪ್ರೀತಿಯು ಮದುವೆಯವರೆಗೆ ಬೆಳೆದು ಕೊಂಡಿತ್ತು. ಇವರ ಮದುವೆ ಕನಕಪುರ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನಿಬಂಧಿತವಾಗಿ ನಡೆದಿತ್ತು. ಗಂಡ ಅಭಿಷೇಕ್ ಕನಕಪುರದ ಕರಿಕಲ್ಲ ದೊಡ್ಡಿಯ ನಿವಾಸಿ ಆಗಿದ್ದಾನೆ.
ಆದರೆ, ಮದುವೆಯ ನಂತರ ವರದಕ್ಷಿಣೆಗಾಗಿ ಗಂಡ ಅಭಿಷೇಕ್ ಹಾಗೂ ಅವನ ತಾಯಿ ಲಕ್ಷ್ಮಮ್ಮ ಇವರಿಂದ ಸ್ಪಂದನಾ ನಿರಂತರ ಕಿರುಕುಳಕ್ಕೊಳಗಾಗುತ್ತಿದ್ದಾಳೆ ಎಂಬ ಆರೋಪ ಮಾಡಿದ್ದಾರೆ. ಭೀಮನ ಅಮಾವಾಸ್ಯೆ ಪ್ರಯುಕ್ತ ನಿನ್ನೆ (ಜು.24) ಗಂಡನಿಗೆ ಪಾದಪೂಜೆ ಮಾಡಿದ ಸ್ಪಂದನಾ, ಅದಾದ ಕೆಲ ಹೊತ್ತಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮಹಿಳೆಯ ಪೋಷಕರಿಗೆ ಸ್ಥಳೀಯರು ಮಾಹಿತಿ ನೀಡಿದ ಬಳಿಕ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.