ಹೊಸ ದಿಗಂತ ವರದಿ, ಮಂಗಳೂರು:
ಸದನ ನಡೆಸುವುದು ಕೇವಲ ಸಭಾಧ್ಯಕ್ಷರ ಜವಾಬ್ಧಾರಿ ಮಾತ್ರವಲ್ಲ, ಎಲ್ಲಾ ಸದಸ್ಯರ ಜವಾಬ್ದಾರಿಯಾಗಿದೆ. ಅದನ್ನು ಅರಿತುಕೊಂಡು ಎಲ್ಲರು ನಡೆದುಕೊಂಡಾಗ ಕಲಾಪ ಸುಗಮವಾಗಿ ಸಾಗಲು ಸಾಧ್ಯವಾಗುತ್ತದೆ ಎಂದು ವಿಧಾನ ಸಭಾ ಅಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಶಾಸಕರು ಸ್ವಯಂ ಪ್ರೇರಿತವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕು. ಶಾಸಕರ ಗೌರವವನ್ನು ಉಳಿಸಬೇಕು. ಜನ ಎಲ್ಲವನ್ನು ನೋಡುತ್ತಿರುತ್ತಾರೆ. ಸದನದಲ್ಲಿ ಶಾಸಕ ಶಿವಲಿಂಗೇಗೌಡ ಮತ್ತು ಶರಣು ಸಲಗಾರ್ ಅವರ ನಡುವಿನ ಮಾತಿನ ಚಕಮಕಿಯಂತಹ ಘಟನೆಗಳು ಹಿಂದೆಯೂ ಆಗಿವೆ. ಅಭಿವೃದ್ಧಿ ಚರ್ಚೆಗಳಾಗಬೇಕಾದ ಸದನದಲ್ಲಿ ಇಂತಹ ಗಲಾಟೆಗಳು ನಡೆಯಬಾರದು. ಸದನ ಕುಟುಂಬ ಇದ್ದಂತೆ ಎಲ್ಲವನ್ನು ಬಗೆಹರಿಸಿಕೊಂಡು ಹೋಗುವುದೇ ಸದನದ ಸಂಸ್ಕೃತಿ ಎಂದರು.
೨೨೪ ಶಾಸಕರಲ್ಲಿ ಕೆಲವು ಶಾಸಕರ ವರ್ತನೆ ಮಾತ್ರ ಈ ರೀತಿ ಇರುತ್ತದೆ. ಎಲ್ಲರೂ ಈ ರೀತಿಯ ವರ್ತನೆ ಮಾಡುವುದಿಲ್ಲ. ಸದನದಲ್ಲಿ ಎಲ್ಲರಿಗೂ ಜವಬ್ದಾರಿಗಳಿವೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಬರುವವರೆಲ್ಲರೂ ಸತ್ಪ್ರಜೆಗಳು ಸಮಾಜದಲ್ಲಿ, ಕ್ಷೇತ್ರದಲ್ಲಿ ಜನರನ್ನು ತಿದ್ದುವವರು ಈ ರೀತಿ ಮಾಡಬಾರದು. ಎಲ್ಲರೂ ಕಾನೂನು, ನಿಯಮಗಳನ್ನು ತಿಳಿದುಕೊಂಡವರೇ ಆಗಿದ್ದಾರೆ. ಆದ್ದರಿಂದ ಸುಮ್ಮನೆ ಸದನದಲ್ಲಿ ಗದ್ದಲ ಸೃಷ್ಟಿಸುವುದು ಸರಿಯಲ್ಲ ಎಂದು ಸ್ಪೀಕರ್ ಖಾದರ್ ಹೇಳಿದರು.



