ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಿಯಕರನೊಂದಿಗೆ ಮೋಜು-ಮಸ್ತಿ ಮಾಡುವ ಸಲುವಾಗಿ ಚಿಕ್ಕಪ್ಪನ ಮನೆಯಿಂದ 1 ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ಕಳವು ಮಾಡಿದ್ದ ಆರೋಪದ ಮೇಲೆ ಬಿಕಾಂ ವಿದ್ಯಾರ್ಥಿನಿ ಸೇರಿ ನಾಲ್ವರು ಆರೋಪಿಗಳನ್ನು ಕೊತ್ತನೂರು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಬಂಧಿತನ್ನು ಸಚಿತಾ, ಈಕೆಯ ಗೆಳೆಯ ಮತ್ತು ಸಹಪಾಠಿಗಳಾದ ತನುಷ್. ಯಶವಂತ್, ರಾಮಪ್ರಕಾಶ್ ಎಂದು ಗುರುತಿಸಲಾಗಿದೆ. ಜೂನ್ ಮೊದಲ ವಾರದಲ್ಲಿ, ಸಚಿತಾ ತನ್ನ ಚಿಕ್ಕಪ್ಪ ಬಿ ಎನ್ ಶ್ರೀನಿವಾಸ್ ಅವರ ಮನೆಗೆ ತೆರಳಿದ್ದು, ಅವರ ಮನೆಯ ಲಾಕರ್ನಲ್ಲಿ ಇರಿಸಲಾಗಿದ್ದ 1 ಕೆಜಿಗೂ ಹೆಚ್ಚು ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದಳು.
ಈ ನಡುವೆ ಕಳ್ಳತನ ಕುರಿತು ಶ್ರೀನಿವಾಸ್ ಅವರು ದೂರು ನೀಡಿದ್ದರು. ಆರಂಭದಲ್ಲಿ ಮನೆ ಕೆಲಸಗಾರರು ಕಳ್ಳತನದಲ್ಲಿ ಭಾಗಿಯಾಗಿರಬಹುದು ಎಂದು ಅನುಮಾನಿಸಿದರು, ನಂತರ ಅವರ ಪಾತ್ರವಿಲ್ಲ ಎಂಬುದು ಖಚಿತವಾಗಿತ್ತು. ಬಳಿಕ ನಿಧಾನಗತಿಯಲ್ಲಿ ಚಿಂತನೆ ನಡೆಸಿದಾಗ ಅಪರಾಧ ನಡೆಯುವುದಕ್ಕೂ ಆರು ತಿಂಗಳ ಮೊದಲು ಸಚಿತಾ ನಿಯಮಿತವಾಗಿ ತಮ್ಮ ಮನೆಗೆ ಭೇಟಿ ನೀಡುತ್ತಿದ್ದು, ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಳಿಕ ಸಚಿತಾಳನ್ನು ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗೊಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ. ಚಿಕ್ಕಪ್ಪನ ಮನೆಯಲ್ಲಿ ದೊಡ್ಡ ಪ್ರಮಾಣದ ಚಿನ್ನ ಇರುವುದು ತಿಳಿದುಬಂದಿತ್ತು. ಜನವರಿಯಿಂದ ಹಂತ ಹಂತವಾಗಿ ಆಭರಣಗಳನ್ನು ಕದಿಯಲು ಪ್ರಾರಂಭಿಸಿದ್ದೆ ಎಂದು ಸಚಿತಾ ಹೇಳಿಕೊಂಡಿದ್ದಾಳೆ.
ಆಭರಣಗಳನ್ನು ಯಶವಂತ್ಗೆ ನೀಡಿದ್ದೆ. ಆತ ತನ್ನ ಸ್ನೇಹಿತ ತನುಷ್ ಹಾಗೂ ರಾಮಪ್ರಕಾಶ್’ಗೆ ನೀಡುತ್ತಿದ್ದ. ಮೂವರು ಸೇರಿ ಚಿನ್ನವನ್ನು ಕರಗಿಸಿ ಚಿನ್ನದ ಗಟ್ಟಿಗಳಾಗಿ ಪರಿವರ್ತಿಸಿ ಮಾರಾಟ ಮಾಡುತ್ತಿದ್ದರು ಎಂದು ಸಚಿತಾ ತಿಳಿಸಿದ್ದಾಳೆ.
ಇದೀಗ ಆರೋಪಿಗಳಿಂದ 65 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಮತ್ತು 10 ಲಕ್ಷ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.