ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳವಾರ (ಆ.05) ರಂದು ಸಾರಿಗೆ ನೌಕರರು ಯಾವುದೇ ರ್ಯಾಲಿ ನಡೆಸುವುದಿಲ್ಲ, ಬದಲಿಗೆ ಬಸ್ ಸಂಚಾರ ಸ್ಥಗಿತಗೊಳಿಸಿ ಎಲ್ಲ ಸಿಬ್ಬಂದಿ ಮನೆಯಲ್ಲಿರುತ್ತಾರೆ ಎಂದು ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೂಡಲೇ ಸರ್ಕಾರ 38 ತಿಂಗಳ ಅರಿಯರ್ಸ್ ಕೊಡಬೇಕು. ಶಕ್ತಿ ಯೋಜನೆಯನ್ನು ನಾವು ಯಶಸ್ವಿಯಾಗಿ ನಿರ್ವಹಿಸ್ತಿದ್ದೇವೆ.ಆದ್ರೆ ನಮ್ಮ ಸಿಬ್ಬಂದಿಗೆ ಒಂದು ಕೃತಜ್ಞತೆಯನ್ನ ಹೇಳಿದ್ರಾ ನೀವು? ಎಂದು ಸರ್ಕಾರಕ್ಕೆ ಪ್ರಶ್ನಿಸಿದರು.
ಎಸ್ಮಾ ಜಾರಿ ಮಾಡ್ತಿವಿ ಅನ್ನೋದು, ಮುಷ್ಕರ ಮಾಡಿದ್ರೆ ಸಂಬಳ ನೀಡುವುದಿಲ್ಲ ಎನ್ನುವುದು ಸರಿಯಲ್ಲ ಏನಾದರೂ ಹಿಂದಿನ ಆದೇಶದಲ್ಲಿ ತಪ್ಪಾಗಿದ್ರೆ ಅದನ್ನು ಬದಲಾವಣೆ ಮಾಡಿ. ನಮ್ಮ ಬೇಡಿಕೆಗಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಬೇಡಿ ಸಿದ್ದರಾಮಯ್ಯ ಅವರೇ ಎಂದು ಸಾರಿಗೆ ಮುಖಂಡ ಅನಂತ್ ಸುಬ್ಬರಾವ್ ಹೇಳಿದ್ದಾರೆ.
ನಮ್ಮ ಇಲಾಖೆಯಲ್ಲಿ ಒಂದೇ ಒಂದು ರೂ. ಹಗರಣ ಆಗಿಲ್ಲ. ಸಾರಿಗೆ ಸಿಬ್ಬಂದಿಗೆ ಸಿದ್ದರಾಮಯ್ಯ ಸರ್ಕಾರ ವಿಶ್ವಾಸ ದ್ರೋಹ ಮಾಡಿದೆ. ಸರ್ಕಾರ ವಿಶ್ವಾಸ ದ್ರೋಹ ಮಾಡಿದೆ ಎಂಬ ಭಾವನ ಬಂದಿದೆ. ಮುಷ್ಕರ ತಪ್ಪಿಸುವ ಅವಕಾಶ ಇದೆ. ಪೊಲೀಸ್ ಅಧಿಕಾರಿಗಳು ನಮ್ಮನ್ನು ಈಗಾಗಲೇ ಕರೆಯುತ್ತಿದ್ದಾರೆ. ನಮ್ಮನ್ನು ಅರೆಸ್ಟ್ ಮಾಡಿ ಪಾಕಿಸ್ತಾನ ಜೈಲಿಗೆ ಹಾಕುತ್ತೀರಾ? ನಮ್ಮನ್ನ ಕರೆದು ಸಮಪರ್ಕವಾಗಿ ಮಾತಾಡಿ. ಬೇರೆ ಯಾರದ್ದೋ ಮಾತು ಕೇಳಿ ಹಾಳಾಗಬೇಡಿ ಎಂದು ಹೇಳಿದರು.
ಸಿಎಂ ನಾಳೆ ಸಭೆ ಕರೆದಿದ್ದಾರೆ ಹೋಗುತ್ತೇವೆ. ಕೊನೆ ಗಳಿಗೆಯಲ್ಲಿ ಸಭೆ ಕರೆಯಬೇಡಿ ಎಂದು ಮನವಿ ಮಾಡಿದ್ದೇವೆ. ಆದರೂ ಕೊನೆಯ ಗಳಿಗೆಯಲ್ಲೇ ಸಭೆ ಕರೆದಿದ್ದಾರೆ. ಎಸ್ಮಾ ಜಾರಿ ಮಾಡುತ್ತೇವೆ ಎಂಬುವದು, ಮುಷ್ಕರ ಮಾಡಿದ್ರೆ ಸಂಬಳ ನೀಡುವುದಿಲ್ಲ ಎನ್ನುವುದು ಸರಿಯಲ್ಲ. ಏನಾದರೂ ಹಿಂದಿನ ಆದೇಶದಲ್ಲಿ ತಪ್ಪಾಗಿದ್ದರೇ ಅದನ್ನು ಬದಲಾವಣೆ ಮಾಡಿ. ನಮ್ಮ ಬೇಡಿಕೆಗಳ ಬಗ್ಗೆ ಬಾಯಿಗೆ ಬಂದ ಹಾಗೆ ಮಾತಾಡಬೇಡಿ. ನಾಳೆಯ ಸಭೆಯಲ್ಲಿ ಹಳೆಯ ಹಾಡನ್ನು ಹಾಡಿದ್ರೆ, ಬಿಜೆಪಿ ಸರ್ಕಾರ ನೀಡಬೇಕಿರೋದು ಅನ್ನಬೇಡಿ. 500 ಕೋಟಿ ಟಿಕೆಟ್ ಹಂಚಿಕೆ ಮಾಡಿದ್ರಿ ಆದರೆ ನಿರ್ವಾಹಕ ಮತ್ತು ಚಾಲಕರಿಗೆ ಧನ್ಯವಾದ ಹೇಳಲಿಲ್ಲ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ 1,15,000ಕ್ಕೂ ಹೆಚ್ಚು ನೌಕರರು ವೇತನ ಪರಿಷ್ಕರಣೆ, ಬಾಕಿ ಇರುವ ಅರಿಯರ್ಸ್ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. 38 ತಿಂಗಳ ಅರಿಯರ್ಸ್, ಹೊಸ ವೇತನ ಪರಿಷ್ಕರಣೆ (ಶೇಕಡಾ 25%) ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಸರಕಾರ ವಿಳಂಬ ಮಾಡುತ್ತಿರುವುದರಿಂದ ಮುಷ್ಕರ ತಪ್ಪಿಸಿಕೊಳ್ಳಲಾಗದೆ ಬಂದ ಸ್ಥಿತಿಯಾಗಿದೆ.