ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್ ಜಿಲ್ಲೆಯ ಬಸವಕಲ್ಯಾಣ ನಗರದಲ್ಲಿನ ಓಂ ನಗರದಲ್ಲಿ ಯುವ ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.
ಅಂಜನಾಬಾಯಿ ಪಾಟೀಲ್ (22) ಮೃತಪಟ್ಟವರಾಗಿದ್ದು, ಮನೆಯಲ್ಲೇ ಯಾರೂ ಇಲ್ಲದ ಸಮಯದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳ ತಂದೆ ವಿಜಯ್ ಕುಮಾರ್ ಅವರು ನೀಡಿದ ದೂರಿನ ಪ್ರಕಾರ, ಅಂಜನಾಬಾಯಿ ಅವರ ಪತಿ ಶೇಖರ್, ಅತ್ತೆ ಅರುಣಾಬಾಯಿ ಮತ್ತು ಮಾವ ಚಂದ್ರಕಾಂತರಿಂದ ನಿರಂತರ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು, ವೇಶ್ಯಾವಾಟಿಕೆ ಮಾಡು ಎಂದು ಅತ್ತೆ ಹೇಳುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಬಸವಕಲ್ಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:
ದೂರಿನಲ್ಲಿ ಅತ್ತೆ ತನ್ನ ಮಗಳಿಗೆ ಅವಮಾನಕಾರಿ ಮಾತುಗಳಿಂದ ಕಿರುಕುಳ ನೀಡುತ್ತಿದ್ದಳು ಎಂದು ಸಹ ಉಲ್ಲೇಖಿಸಲಾಗಿದೆ. ಮೂರು ವರ್ಷಗಳ ಹಿಂದೆ ಅಂಜನಾಬಾಯಿ ಮತ್ತು ಶೇಖರ್ ವಿವಾಹವಾಗಿದ್ದು, ಕುಟುಂಬದ ವಿಚಾರವಾಗಿ ಆಗಾಗ ಜಗಳಗಳು ನಡೆಯುತ್ತಿದ್ವೆ ಎನ್ನಲಾಗಿದೆ. ಪಾನಿಪುರಿ ವ್ಯಾಪಾರ ಮಾಡುತ್ತಿದ್ದ ಶೇಖರ್ ರಾತ್ರಿ ತಡವಾಗಿ ಮನೆಗೆ ಬರುವುದು, ಇದನ್ನು ಪ್ರಶ್ನಿಸಿದ ಅಂಜನಾಬಾಯಿಗೆ ಮನೆಯವರಿಂದ ಗದರಿಕೆ ಎದುರಾಗುತ್ತಿತ್ತು ಎಂದು ಆರೋಪಿಸಲಾಗಿದೆ.
ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.



