ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಮ್ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಇಂದು (ಭಾನುವಾರ) ಆಂಧ್ರಪ್ರದೇಶದ ಪವಿತ್ರ ಕ್ಷೇತ್ರವಾದ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ವಿಶಿಷ್ಟ ಹೇರ್ಸ್ಟೈಲ್ಗಳ ಮೂಲಕ ಸುದ್ದಿಯಾಗುತ್ತಿದ್ದ ಪಾಂಡ್ಯ, ಈ ಬಾರಿ ಕೇಶ ಮುಂಡನ ಮಾಡಿಸಿಕೊಂಡು ಹೊಸ ಲುಕ್ನಲ್ಲಿ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.
ಮುಂಜಾನೆಯ ಸುಪ್ರಭಾತ ಸೇವೆಯಲ್ಲಿ ಭಾಗಿ:
ಹಾರ್ದಿಕ್ ಪಾಂಡ್ಯ ಇಂದು ಮುಂಜಾನೆ ನಡೆದ ಪವಿತ್ರ ಸುಪ್ರಭಾತ ಸೇವೆಯಲ್ಲಿ ಪಾಲ್ಗೊಂಡು ಶ್ರೀವಾರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಿರುಮಲ ಬೆಟ್ಟಕ್ಕೆ ಆಗಮಿಸಿದ ಕ್ರಿಕೆಟಿಗನನ್ನು ತಿರುಮಲ ತಿರುಪತಿ ದೇವಸ್ಥಾನಂ (TTD) ಅಧಿಕಾರಿಗಳು ಮತ್ತು ಅರ್ಚಕರು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಈ ಆಧ್ಯಾತ್ಮಿಕ ಭೇಟಿಯ ವೇಳೆ ಹಾರ್ದಿಕ್ ಪಾಂಡ್ಯರೊಂದಿಗೆ ಅವರ ಆಪ್ತ ಗೆಳತಿ ಮಹಿಕಾ ಶರ್ಮಾ ಕೂಡ ಜೊತೆಯಲ್ಲಿದ್ದರು
ಸಂಪೂರ್ಣ ಫಿಟ್ ಆದ ಪಾಂಡ್ಯ:
ಗಾಯದ ಸಮಸ್ಯೆಯಿಂದಾಗಿ ಕಳೆದ ಕೆಲವು ಸರಣಿಗಳಿಂದ ಹೊರಗುಳಿದಿದ್ದ ಹಾರ್ದಿಕ್ ಪಾಂಡ್ಯ ಇದೀಗ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಕ್ಕೂ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ವೈದ್ಯಕೀಯ ಮಂಡಳಿ ಖಚಿತಪಡಿಸಿದೆ. ಮುಂಬರುವ ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಪಾಂಡ್ಯ ಆಯ್ಕೆಗೆ ಲಭ್ಯರಾಗಲಿದ್ದಾರೆ.
ಇದನ್ನೂ ಓದಿ;
2027 ರ ವಿಶ್ವಕಪ್ ಗೆಲ್ಲುವ ಮಹತ್ವಾಕಾಂಕ್ಷೆ:
ಮುಂದಿನ 2027 ರ ಏಕದಿನ ವಿಶ್ವಕಪ್ ಟ್ರೋಫಿಯನ್ನು ಭಾರತಕ್ಕೆ ತಂದುಕೊಡಲೇಬೇಕೆಂಬ ದೃಢ ಸಂಕಲ್ಪ ತೊಟ್ಟಿರುವ ಹಾರ್ದಿಕ್ ಪಾಂಡ್ಯ, ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ವಿಶೇಷ ಒತ್ತು ನೀಡಿದ್ದಾರೆ. ನೆಟ್ಸ್ನಲ್ಲಿ ಪ್ರತಿದಿನ ಸತತವಾಗಿ 12 ಓವರ್ಗಳವರೆಗೆ ಬೌಲಿಂಗ್ ಮಾಡುವ ಮೂಲಕ ತಮ್ಮ ಹಳೆಯ ಲಯಕ್ಕೆ ಮರಳಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ. ಹಾರ್ದಿಕ್ ಈ ಫಿಟ್ನೆಸ್ ಕ್ರೇಜ್ ನೋಡಿ ಮ್ಯಾನೇಜ್ಮೆಂಟ್ ಹಾಗೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.



