ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಉಗ್ರರು ಮಾಡಿದ್ದ ದಾಳಿಯಲ್ಲಿ ಕರ್ನಾಟಕ ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ್ದರು. ಬಳಿಕ ಭಾರತೀಯ ಸೇನೆ ಮೇ 7ರಂದು ‘ಆಪರೇಶನ್ ಸಿಂಧೂರ’ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದಲ್ಲಿದ್ದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿತ್ತು. ಪ್ರಧಾನಿ ಮೋದಿ ಆಪರೇಶನ್ ಸಿಂಧೂರವನ್ನು ದೇಶದ ಹೆಣ್ಣುಮಕ್ಕಳಿಗೆ ಸಮರ್ಪಿಸಿದ್ದರು. ಇದೀಗ ಇದೇ ಆಪರೇಶನ್ ಸಿಂಧೂರ ಹೆಸರಿನಲ್ಲಿ ಗದಗಿನ ನೇಕಾರರೊಬ್ಬರು ಕೈಮಗ್ಗದಲ್ಲಿ ಸೀರೆ ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾರೆ.
ಈ ಸೀರೆಯನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದ್ದು, “ಆಪರೇಷನ್ ಸಿಂಧೂರ” ಎಂದು ದಪ್ಪವಾಗಿ ಇಂಗ್ಲಿಷ್ನಲ್ಲಿ ಮುದ್ರಿಸಲಾಗಿದೆ. ಸೀರೆಯ ರೇಷ್ಮೆ ಬಾರ್ಡರ್ನಲ್ಲಿ ತ್ರಿವರ್ಣ ಧ್ವಜದ ಕಲರ್ನಲ್ಲಿ ಮೂರು ಯುದ್ಧ ವಿಮಾನಗಳನ್ನು ಕಸೂತಿ ಮಾಡಲಾಗಿದೆ. ಗಜೇಂದ್ರಗಡ ಶುದ್ಧ ಹತ್ತಿ ನೂಲಿನಿಂದ ತಯಾರಿಸಲ್ಪಡುವ ಪಟ್ಟೇದಂಚಿನ ಸೀರೆಗಳಿಗೆ ಹೆಸರುವಾಸಿ. ಈ ವರ್ಷ ಅವುಗಳಿಗೆ ಜಿಐ ಟ್ಯಾಗ್ ಕೂಡ ಸಿಕ್ಕಿದೆ. ಪ್ರಸ್ತುತ, ಇಲ್ಲಿ ಸುಮಾರು 400 ಕೈಮಗ್ಗಗಳಿದ್ದು, ಅವುಗಳಲ್ಲಿ ಸುಮಾರು 200 ಕೈಮಗ್ಗಗಳಿಂದ ಈ ಪಟ್ಟೇದಂಚಿನ ಸೀರೆಗಳನ್ನು ನೇಯಲಾಗುತ್ತದೆ.