ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಾಳ ಕ್ರಾಸ್ ಪರಿಸರದಲ್ಲಿ ಬುಧವಾರ ನಡೆದ ಅಹಿತಕರ ಘಟನೆಗೆ ಸಂಬಂಧಿಸಿ ಧರ್ಮಸ್ಥಳ ಠಾಣೆಯಲ್ಲಿ ನಾಲ್ಕು ಹಾಗೂ ಬೆಳ್ತಂಗಡಿ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ಯಾವ ಪ್ರಕರಣ?
ಬಂಟ್ವಾಳ ನಿವಾಸಿ ಅಜಯ್ ಎಂಬವರು ನೀಡಿದ ದೂರಿನಲ್ಲಿ ತಾನು ಕುಡ್ಲ ರಾಂಪೇಜ್ ಎಂಬ ಯುಟ್ಯೂಬ್ ಚಾನೆಲ್ನ ಮಾಲಕರಾಗಿದ್ದು, ಆ.6 ರಂದು ಸಂಜೆ, ಧರ್ಮಸ್ಥಳ ಪಾಂಗಳ ಕ್ರಾಸ್ ಎಂಬಲ್ಲಿ, ವ್ಯಕ್ತಿಯೊರ್ವರೊಂದಿಗೆ ಮಾಹಿತಿ ಸಂಗ್ರಹ ವೇಳೆ ಸುಮಾರು 15 ರಿಂದ 50 ಜನರ ಗುಂಪು ಬಂದು ನನ್ನ, ಕ್ಯಾಮರ ಮೆನ್ ಸುಹಾಸ್, ಸಂಚಾರಿ ಸ್ಟುಡಿಯೋದ ಸಂತೋಷ್ ಹಾಗೂ ಯುನೈಟೆಡ್ ಮೀಡಿಯಾದ ಅಭಿಷೇಕ್ ಎಂಬವರಿಗೆ ಹಲ್ಲೆ ನಡೆಸಿ, ಸುಹಾಸ್ ಅವರ ಕ್ಯಾಮರಾವನ್ನು ರಸ್ತೆಗೆಸೆದು ಹಾನಿಗೊಳಿಸಿ, ಅದರಲ್ಲಿದ್ದ ಮೆಮೊರಿ ಕಾರ್ಡ್ ಕಳವು ಮಾಡಿ, ಬಳಿಕ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂದು ಆರೋಪಿಸಿದ್ದಾರೆ.
ಎರಡನೆಯ ಪ್ರಕರಣ
ಬುಧವಾರ ಸಂಜೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಪಾಂಗಳ ಕ್ರಾಸ್ ಎಂಬಲ್ಲಿ, ಸುಮಾರು 25 ರಿಂದ 50 ಜನರು, ಎರಡು ಪ್ರತ್ಯೇಕ ಗುಂಪುಗಳಾಗಿ ಅಪರಾಧಿಕ ಕೃತ್ಯ ನಡೆಸಲು ಅಕ್ರಮ ಕೂಟ ಸೇರಿದ್ದು, ಈ ವೇಳೆ ಸ್ಥಳಕ್ಕೆ ಬಂದ ಧರ್ಮಸ್ಥಳ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಇತರೆ ಪೊಲೀಸ್ ಅಧಿಕಾರಿಗಳು, ಯಾವುದೇ ಅಹಿತಕರ ಘಟನೆಗೆ ನಡೆಸದೇ ಸ್ಥಳದಿಂದ ತೆರಳುವಂತೆ ಸೂಚಿಸಿದರೂ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡ್ಡಿಪಡಿಸಿ, ಸೇರಿದ್ದ ಗುಂಪುಗಳು ಪರಸ್ಪರ ಗಲಾಟೆ ನಡೆಸಿದ್ದಾರೆ ಎಂಬ ಬಗ್ಗೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರನೆಯ ಪ್ರಕರಣ
ಬುಧವಾರ ಸಂಜೆ ಧರ್ಮಸ್ಥಳ ಗ್ರಾಮದ ಪಾಂಗಾಳ ಕ್ರಾಸ್ ಬಳಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದಂತೆ, ಸುಮಾರು 50-100 ಮಂದಿ, ಧರ್ಮಸ್ಥಳ ಠಾಣಾ ಆವರಣ ಮುಂದೆ ಯಾವುದೇ ಪೂರ್ವಾನುಮತಿಯಿಲ್ಲದೇ, ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿರುತ್ತಾರೆ. ಅವರುಗಳ ವಿರುದ್ದ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದೆ.
ನಾಲ್ಕನೆಯ ಪ್ರಕರಣ
ಬುಧವಾರ ಧರ್ಮಸ್ಥಳ ಪಾಂಗಳ ಕ್ರಾಸ್ ಎಂಬಲ್ಲಿ, ಯೂಟ್ಯೂಬರ್ಸ್ಗಳಿಗೆ ಹಲ್ಲೆ ನಡೆದಿರುವ ವಿಚಾರ ತಿಳಿದು ಸದ್ರಿ ಸ್ಥಳಕ್ಕೆ ಬಂದ ಬೆಳ್ತಂಗಡಿ ನಿವಾಸಿ ಪ್ರಮೋದ್ ಕುಮಾರ್ ಶೆಟ್ಟಿ (42) ಎಂಬವರಿಗೆ, ಅಲ್ಲಿ ಸೇರಿದ್ದ ಸುಮಾರು 30 ರಿಂದ 40 ಜನರ ಗುಂಪು ಅವ್ಯಾಚವಾಗಿ ಬೈದು, ಹಲ್ಲೆ ನಡೆಸಿದ್ದು, ಸ್ಥಳದಲ್ಲಿದ್ದ ಎರಡು ವಾಹನಗಳಿಗೆ ಹಾಗೂ ಕ್ಯಾಮರಾಕ್ಕೆ ಹಾನಿಗೊಳಿಸಿದ್ದಾರೆ ಎಂಬ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಠಾಣೆಯಲ್ಲಿ ಯವ್ಯಾವ ಪ್ರಕರಣ?
ತಾನು ಏಷಿಯನೆಟ್ ಸುವರ್ಣ ಎಂಬ ಖಾಸಗಿ ಚಾನೇಲ್ನ ಕ್ರೈಂ ವರದಿಗಾರನಾಗಿ ಕೆಲಸ ಮಾಡಿಕೊಂಡಿದ್ದು, ಅ.6 ರಂದು ಧರ್ಮಸ್ಥಳ ಪಾಂಗಾಳ ಕ್ರಾಸ್ ನಲ್ಲಿ ನಡೆದ ಹಲ್ಲೆಯ ಗಾಯಾಳುಗಳ ಬಗ್ಗೆ ವರದಿ ಮಾಡಲು ಉಜಿರೆ ಬೆನಕ ಆಸ್ಪತ್ರೆಯ ಬಳಿ ತೆರಳಿದಾಗ ಅಲ್ಲಿದ್ದ ಗಿರೀಶ್ ಮಟ್ಟಣ್ಣನವರ್ ಎಂಬವರೊಂದಿಗೆ ವಿಡಿಯೋ ಬೈಟ್ ಕೊಡುವಂತೆ ಕೇಳಿದಾಗ, ಅವರು ಏಕಾಏಕಿ ಬೈದಿರುತ್ತಾರೆ. ಸ್ಥಳದಲ್ಲಿದ್ದ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಅವರೊಂದಿಗಿದ್ದ ಇತರರು ಹಲ್ಲೆ ನಡೆಸಿ ಅವ್ಯಾಚವಾಗಿ ಬೈದಿರುತ್ತಾರೆ. ಆ ವೇಳೆ ಸ್ಥಳಕ್ಕೆ ಬಂದ ಮತ್ತೋರ್ವ ಆರೋಪಿ ಸಮೀರ್ ಎಂಬಾತನು ಜೀವ ಬೆದರಿಕೆ ಹಾಕಿದ್ದಾನೆ ಎಂದು ಬೆಂಗಳೂರು ನಿವಾಸಿ ಹರೀಶ್ ಆರ್. (34) ಎಂಬವರ ದೂರಿನಂತೆ ಪ್ರಕರಣ ದಾಖಲಾಗಿದೆ.
ಎರಡನೆಯ ಪ್ರಕರಣ
ಆ.6 ರಂದು ಧರ್ಮಸ್ಥಳದ ಪಾಂಗಳ ಎಂಬಲ್ಲಿ ಹಲ್ಲೆಗೊಳಗಾದವರನ್ನು ಚಿಕಿತ್ಸೆಗಾಗಿ ಉಜಿರೆ ಬೆನಕಾ ಆಸ್ಪತ್ರೆಗೆ ವಾಹನವೊಂದರಲ್ಲಿ ಕರೆತಂದಿದ್ದು, ಗಾಯಾಳುಗಳನ್ನು ನೋಡಲು ಬಂದ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಗಿರೀಶ್ ಮಟ್ಟಣ್ಣನವರ್ ಎಂಬವರನ್ನು ಬೈಟ್ ಕೊಡುವಂತೆ ಸುವರ್ಣ ನ್ಯೂಸ್ ನ ವರದಿಗಾರ ಹಾಗೂ ಕ್ಯಾಮರಾಮೆನ್ ತಡೆದು ನಿಲ್ಲಿಸಿರುತ್ತಾರೆ. ಬೈಟ್ ಕೊಡಲು ನಿರಾಕರಿಸಿದಾಗ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ, ತಳ್ಳಾಟ ನಡೆಸಿದ್ದಾರೆ. ಈ ಘಟನೆ ನಡೆದು ಕೆಲಹೊತ್ತಿನಲ್ಲಿ ಸುವರ್ಣ ಸುದ್ದಿ ವಾಹಿನಿಯಲ್ಲಿ ಅಜಿತ್ ಹನುಮಕ್ಕನವರ್ ಎನ್ನುವ ನ್ಯೂಸ್ ಆಂಕರ್, ‘ಸುವರ್ಣ ನ್ಯೂಸ್ ವರದಿಗಾರರ ಮೇಲೆ ಮಹೇಶ್ ಶೆಟ್ಟಿ ತಿಮರೋಡಿಯಿಂದ ಹಲ್ಲೆ’ ಎಂದು ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ ಎಂದು ಬೆಳ್ತಂಗಡಿ ನಿವಾಸಿ ಗಣೇಶ್ ಶೆಟ್ಟಿ (28) ಎಂಬವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಮೂರನೆಯ ಪ್ರಕರಣ
ಬುಧವಾರ ಸಂಜೆ ಧರ್ಮಸ್ಥಳ ಪಾಂಗಳ ಕ್ರಾಸ್ ನಲ್ಲಿ ನಡೆದ ಹಲ್ಲೆಯ ಗಾಯಾಳುಗಳನ್ನು ಚಿಕಿತ್ಸೆಗಾಗಿ ದಾಖಲಿಸಿದ್ದ ಬೆಳ್ತಂಗಡಿ ಉಜಿರೆ ಬೆನಕ ಆಸ್ಪತ್ರೆಯ ಬಳಿ ಸಾರ್ವಜನಿಕರು ಜಮಾವಣೆಗೊಂಡಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಬೆಳ್ತಂಗಡಿ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದಾಗ, ಸ್ಥಳದಲ್ಲಿ ಸುಮಾರು 50 ರಿಂದ 100 ಜನರು ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿ, ಘೋಷಣೆಗಳನ್ನು ಕೂಗುತ್ತಿದ್ದು, ಯಾವುದೇ ಅಹಿತಕರ ಘಟನೆ ನಡೆಸದಂತೆ ಹಾಗೂ ಸ್ಥಳದಿಂದ ತೆರಳುವಂತೆ ಸೂಚಿಸಿದರೂ, ಪೂರ್ವಾನುಮತಿ ಪಡೆಯದೇ ಅಕ್ರಮಕೂಟ ಸೇರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.