ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರ ಇಂದು ವಿಶೇಷ ರಾಜಕೀಯ ಕ್ಷಣವೊಂದಕ್ಕೆ ಸಾಕ್ಷಿಯಾಯಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವದೆಹಲಿಯಿಂದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಏರ್ಫೋರ್ಸ್ ಹೆಡ್ಕ್ವಾರ್ಟರ್ಸ್ ಟ್ರೈನಿಂಗ್ ಕಮಾಂಡ್ (HQTC) ತಲುಪಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೂಗುಚ್ಛ ನೀಡಿ, ಗಂಧದ ಹಾರ ಹಾಕಿ ಸಾಂಪ್ರದಾಯಿಕ ರೀತಿಯಲ್ಲಿ ಭವ್ಯ ಸ್ವಾಗತ ಕೋರಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿಪಕ್ಷ ನಾಯಕ ಆರ್. ಅಶೋಕ್ ಸೇರಿ ಹಲವು ಪ್ರಮುಖರು ಈ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿದರು.
ಮೋದಿ ಅವರ ಸ್ವಾಗತಕ್ಕೆ ಜೆಡಿಎಸ್ ನಾಯಕರು, ಶಾಸಕರು ಮತ್ತು ಪರಿಷತ್ ಸದಸ್ಯರೂ ಹಾಜರಿದ್ದರು. ಮಳೆಯಲ್ಲಿಯೂ ಸಹ ಸಾವಿರಾರು ಜನರು ರಸ್ತೆ ಬದಿಗಳಲ್ಲಿ ನಿಂತು “ನಮೋ” ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ಮೋದಿ ಅವರು ಸಾರ್ವಜನಿಕರತ್ತ ಕೈ ಬೀಸಿ ಧನ್ಯವಾದ ಸಲ್ಲಿಸಿದರು.
ಪ್ರಧಾನಿ ಮೋದಿ ಅವರ ಈ ಭೇಟಿ ಕೇವಲ ಮೂಲಸೌಕರ್ಯ ಯೋಜನೆಗಳ ಉದ್ಘಾಟನೆಗೆ ಮಾತ್ರ ಸೀಮಿತವಾಗಿರದೆ, ರಾಜ್ಯ–ಕೇಂದ್ರ ಸಹಕಾರದ ಮನೋಭಾವವನ್ನು ಬಲಪಡಿಸಿದೆ. ರಾಜಕೀಯ ಭಿನ್ನತೆಗಳ ಮಧ್ಯೆಯೂ ನಾಯಕರ ಆತ್ಮೀಯತೆ ಮತ್ತು ಜನರ ಉತ್ಸಾಹ, ಬೆಂಗಳೂರಿನಲ್ಲಿ ವಿಶೇಷ ವಾತಾವರಣವನ್ನು ನಿರ್ಮಿಸಿದೆ.