ಹೊಸದಿಗಂತ ವರದಿ ಬೆಂಗಳೂರು:
ಕೆ.ಎನ್.ರಾಜಣ್ಣ ಅವರನ್ನು ಸಂಪುಟದಿಂದ ಉಚ್ಛಾಟನೆ ಮಾಡಿರುವುದು ಕಾಂಗ್ರೆಸ್ ಆಂತರಿಕ ವಿಚಾರವಲ್ಲ. ಈ ಬಗ್ಗೆ ಸದನದಲ್ಲಿ ಚರ್ಚೆಯಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆಗ್ರಹಿಸಿದರು.
ವಿಧಾನಸೌಧ ಆವರಣದಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ, ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿದ್ದರು. ಅವರು ಸತ್ಯ ಹೇಳಿದ್ದಾರೆ ಹೊರತು ಮಾಡಬಾರದ ಘೋರ ಅಪರಾಧ ಮಾಡಿಲ್ಲ. ರಾಹುಲ್ ಗಾಂಧಿಗೆ ಸತ್ಯ ಅರಗಿಸಿಕೊಳ್ಳುವ ಧೈರ್ಯ ಇರಲಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಬಿಜೆಪಿ ಚುನಾವಣಾ ಅಕ್ರಮ ನಡೆಸಿದೆ ಎಂದು ಕಾಂಗ್ರೆಸ್ ದೇಶದ ಮುಂದೆ ಬಿಂಬಿಸಿತ್ತು. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರುಕೊಡದೇ ಪಲಾಯನ ಮಾಡಿದೆ. ಆದರೆ, ಮತದಾರರ ಪಟ್ಟಿ ತಮ್ಮದೇ ಆಡಳಿತದಲ್ಲಿ ಸಿದ್ಧವಾಗಿದೆ ಎಂದು ಕಾಂಗ್ರೆಸ್ ಸರಕಾರದ ಲೋಪಗಳ ಬಗ್ಗೆ ರಾಜಣ್ಣ ಸೂಚ್ಯವಾಗಿ ಹೇಳಿದ್ದಾರೆ. ಇದನ್ನು ಸಹಿಸಲಾಗದೇ ಸಂಪುಟದಿಂದ ಕೈ ಬಿಡಲಾಗಿದೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಸಂವಿಧಾನದ ಬಗ್ಗೆ ಭಾಷಣ ಮಾಡುವವರು ಪರಿಶಿಷ್ಟ ಸಮುದಾಯದವರಿಗೆ ಕೊಡುವ ಗೌರವ ಇದೇನಾ? ಪರಿಶೊಷ್ಟರ ಬಗ್ಗೆ ರಾಹುಲ್ ಗಾಂಧಿಗಿರುವ ಪ್ರೀತಿ ಇಷ್ಟೇನಾ ಎಂದು ಪ್ರಶ್ನಿಸಿದರು.