ಹೊಸದಿಗಂತ ವರದಿ, ಬನವಾಸಿ:
ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಬನವಾಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಜರುಗಿದೆ.
ಶುಕ್ರವಾರದಂದು ಗೂಡ್ಸ್ ವಾಹನವನ್ನು ಸರ್ವಿಸ್ ಮಾಡಿಕೊಂಡು ಶಿರಸಿಯಿಂದ ಕೋರ್ಲಕಟ್ಟಾ ಮಾರ್ಗವಾಗಿ ಜಡೆಗೆ ತೆರಳುವಾಗ ಗೂಡ್ಸ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು ವಾಹನದಲ್ಲಿದ್ದ ಆನವಟ್ಟಿಯ ಸಮಿನಳ್ಳಿ ಗ್ರಾಮದ ಪರಶುರಾಮ ನಾಗಪ್ಪ ಮುಳಾರಮನೆ (30) ಎಂಬುವವನ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಅಪಘಾತದಲ್ಲಿ ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಾಂತೇಶ ಕುಂಬಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.