ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಬ್ಬಾಳದ ಹೊಸ ಮೇಲ್ಸೇತುವೆ ರ್ಯಾಂಪ್ ಸೋಮವಾರ ಉದ್ಘಾಟನೆಗೊಳ್ಳಲಿದ್ದು, ಇದರಿಂದ ಹೆಬ್ಬಾಳದ ಟ್ರಾಫಿಕ್ ದಟ್ಟಣೆ ಶೇಕಡಾ 30 ರಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
ಈಗಾಗಲೇ 2 ದಿನಗಳ ಟ್ರಯಲ್ ರನ್ ನಡೆಸಲಾಗಿದ್ದು, ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಹೆಬ್ಬಾಳದ ಹೊಸ ಮೇಲ್ಸೇತುವೆ ರ್ಯಾಂಪ್ ಅನ್ನು ಉದ್ಘಾಟಿಸಲಿದ್ದಾರೆ.
700 ಮೀಟರ್ ಉದ್ದದ ಹೆಬ್ಬಾಳ ಪ್ಲೈ ಓವರ್ ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ. ಈ ಫ್ಲೈಓವರ್ ಕೆ.ಆರ್ ಪುರಂ ಕಡೆಯಿಂದ ಮೇಖ್ರೀ ಸರ್ಕಲ್ವರೆಗೆ ನಿರ್ಮಾಣ ಮಾಡಲಾಗಿದೆ. ಇದರ ಕಾಮಗಾರಿಯು 2023ರಲ್ಲಿ ಆರಂಭ ಆಗಿದ್ದು, ಒಂದೂವರೆ ವರ್ಷಗಳ ಬಳಿಕ ಫ್ಲೈಓವರ್ ಕಾರ್ಯ ಪೂರ್ಣಗೊಂಡಿದ್ದು, ನಾಳೆ ಬೆಳಗ್ಗೆ 9 ಗಂಟೆಗೆ ಫೈಓವರ್ ಉದ್ಘಾಟನೆ ಆಗಲಿದೆ. ಈ ಫ್ಲೈಓವರ್ನಿಂದ ಹೆಬ್ಬಾಳ ಭಾಗದ ಬಹುದೊಡ್ಡ ಟ್ರಾಫಿಕ್ ಸಮಸ್ಯೆ ನಿವಾರಣೆಯಾಗಲಿದೆ.
ಮೇಖ್ರಿ ಸರ್ಕಲ್ ಬಳಿ ಜಾಮ್
ಹೆಬ್ಬಾಳ ಜಂಕ್ಷನ್ನಲ್ಲಿ ರಾಂಪ್ ನಿರ್ಮಾಣದಿಂದ ಟ್ರಾಫಿಕ್ ಕಡಿಮೆಯಾಗಲಿದೆ. ಆದರೆ, ಮೆಖ್ರಿ ಸರ್ಕಲ್ನಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯಿದೆ ಎಂದು ಸಂಚಾರ ಪೊಲೀಸರು ಹೇಳಿದ್ದಾರೆ. ‘ರಾಂಪ್ ತೆರೆಯುವುದರಿಂದ ವಾಹನಗಳು ಹೆಬ್ಬಾಳ ಜಂಕ್ಷನ್ ಅನ್ನು ಸುಲಭವಾಗಿ ದಾಟಲು ಸಹಾಯವಾಗುತ್ತದೆ. ಆದರೆ, ಟ್ರಯಲ್ ರನ್ ಸಮಯದಲ್ಲಿ, ಮೇಖ್ರಿ ಸರ್ಕಲ್ ಅಂಡರ್ಪಾಸ್ ಬಳಿ ಟ್ರಾಫಿಕ್ ಜಾಮ್ ಉಂಟಾಗುವುದನ್ನು ನಾವು ಗಮನಿಸಿದ್ದೇವೆ. ಇದು ಇತರ ರಸ್ತೆಗಳ ಮೇಲೆ ಪರಿಣಾಮ ಬೀರಿತು’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೇಖ್ರಿ ಸರ್ಕಲ್ ರಸ್ತೆಯನ್ನು ವಿಸ್ತರಿಸಲು ಬಿಬಿಎಂಪಿ ಈಗಾಗಲೇ ರಕ್ಷಣಾ ಇಲಾಖೆಗೆ ಸೇರಿದ ಜಾಗವನ್ನು ಗುರುತಿಸಿದೆ. ರಸ್ತೆ ವಿಸ್ತರಣೆಯಾದರೆ, ಆರ್.ಟಿ.ನಗರ, ಜಯಮಹಲ್ ಮತ್ತು ವಸಂತ ನಗರದ ಕಡೆಗೆ ಹೋಗುವ ವಾಹನಗಳು ಮೇಖ್ರಿ ಸರ್ಕಲ್ನಲ್ಲಿ ಫ್ರೀ ಲೆಫ್ಟ್ ತೆಗೆದುಕೊಳ್ಳಬಹುದು. ಇದರಿಂದ ಟ್ರಾಫಿಕ್ ಕಡಿಮೆಯಾಗುತ್ತದೆ.