ಎಮ್ಮೆಗಳನ್ನು ನೀಡುವುದಾಗಿ ನಿರ್ದೇಶಕ ಪ್ರೇಮ್‌ಗೆ ಲಕ್ಷಾಂತರ ರೂ. ದೋಖಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕನ್ನಡದ ಖ್ಯಾತ ಚಿತ್ರ ನಿರ್ದೇಶಕ ಪ್ರೇಮ್ ಅವರಿಂದ ಲಕ್ಷಾಂತರ ರೂ. ಹಣ ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಹೈನುಗಾರಿಕೆಗಾಗಿ ಎಮ್ಮೆಗಳನ್ನು ಖರೀದಿಸಲು ಇಚ್ಚಿಸಿದ್ದ ಪ್ರೇಮ್ ಅವರಿಂದ 4.50 ‌ಲಕ್ಷ ರೂ. ಹಣ ಪಡೆದು ವಂಚಿಸಿರುವ ಆರೋಪದ ಮೇಲೆ ಎಫ್​ಐಆರ್​ ದಾಖಲಾಗಿದೆ.

ಪ್ರೇಮ್ ಅವರ ಮ್ಯಾನೇಜರ್ ಆಗಿರುವ ದಶಾವರ ಚಂದ್ರು ಎಂಬವರು ನೀಡಿರುವ ದೂರಿನ ಅನ್ವಯ ಗುಜರಾತ್ ಮೂಲದ ವಘೇಲಾ ವನರಾಜ್ ಭಾಯ್ ಎಂಬಾತನ ವಿರುದ್ಧ ಚಂದ್ರಾಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರೇಮ್ ಅವರು ಹೈನುಗಾರಿಕೆ ಮಾಡಲು ಎಮ್ಮೆಗಳನ್ನು ಖರೀದಿಸಲು ಮುಂದಾದಾಗ ಗುಜರಾತ್‌ನ ಗಧಡಾ ಮೂಲದ ವನರಾಜ್ ಭಾಯ್ ಎಂಬಾತನ ಪರಿಚಯವಾಗಿತ್ತು. ಎಮ್ಮೆಗಳ ಖರೀದಿ ಮಾತುಕತೆ ಮಾಡಿದ್ದ ಪ್ರೇಮ್, ಜುಲೈನಲ್ಲಿ 25 ಸಾವಿರ ರೂ. ಮುಂಗಡ ಹಣ ವರ್ಗಾಯಿಸಿದ್ದರು. ಬಳಿಕ ಹಂತ – ಹಂತವಾಗಿ ಒಟ್ಟು 4.50 ಲಕ್ಷ ರೂ. ಹಣವನ್ನು ಆರೋಪಿ ವನರಾಜ್ ಭಾಯ್ ಖಾತೆಗೆ ವರ್ಗಾಯಿಸಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅಲ್ಲದೇ, ವಾಟ್ಸ್ಆ್ಪಪ್ ಮೂಲಕ ಎರಡು ಎಮ್ಮೆಗಳ ವಿಡಿಯೋ ಕಳಿಸಿದ್ದ ವನರಾಜ್ ಭಾಯ್, ಅವುಗಳನ್ನ ಕಳಿಸಿಕೊಡುತ್ತಿರುವುದಾಗಿ ತಿಳಿಸಿದ್ದ. ಆದರೆ, ಒಂದು ವಾರ ಕಳೆದರೂ ಎಮ್ಮೆಗಳು ಬಾರದಿದ್ದಾಗ ಹಣ ವಾಪಸ್ ನೀಡುವಂತೆ ಪ್ರೇಮ್ ಅವರು ಕೇಳಿದ್ದರು. ಆದರೆ ಹಣ ನೀಡದ ವನರಾಜ್ ಭಾಯ್ ಸತಾಯಿಸುತ್ತಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ವನರಾಜ್ ಭಾಯ್ ನೀಡಿದ್ದ ವಿಳಾಸಕ್ಕೆ ಪರಿಚಿತರನ್ನು ಕಳುಹಿಸಿ ವಿಚಾರಿಸಿದಾಗ ಆತ ಆ ವಿಳಾಸದಲ್ಲಿ ಇಲ್ಲ ಎಂದು ತಿಳಿದು ಬಂದಿದೆ. ಸದ್ಯ ಮೊಬೈಲ್ ಆಫ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ವನರಾಜ್ ಭಾಯ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಮ್ಮ ಮ್ಯಾನೇಜರ್ ದಶಾವರ ಚಂದ್ರು ಮೂಲಕ ಪ್ರೇಮ್ ದೂರು ಕೊಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!