ಅಯ್ಯಪ್ಪ ಸಂಗಮಕ್ಕೆ ಬರುವ ಮುನ್ನ ಹಿಂದುಗಳಲ್ಲಿ ಕ್ಷಮೆ ಕೇಳಿ: ಕೇರಳ, ತಮಿಳುನಾಡು ಸಿಎಂಗಳಿಗೆ ಬಿಜೆಪಿ ಒತ್ತಾಯ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ವಿರುದ್ಧ ಬಿಜೆಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ವಾಗ್ದಾಳಿ ನಡೆಸಿದ್ದಾರೆ.

ಕೇರಳದ CPI (ಮಾರ್ಕ್ಸ್‌ವಾದಿ) ಸರ್ಕಾರವು ಅಯ್ಯಪ್ಪ ಸಂಗಮಂ ಎಂಬ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಇದಕ್ಕೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರನ್ನು ಆಹ್ವಾನಿಸುತ್ತಿರುವುದಕ್ಕೆ ಟೀಕೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಚಂದ್ರಶೇಖರ್ ಇದು ಜನರನ್ನು ಮೂರ್ಖರನ್ನಾಗಿಸುವ ನಾಟಕ ಎಂದು ಬಣ್ಣಿಸಿದ್ದು, ಹಿಂದುಗಳು ಮತ್ತು ಅಯ್ಯಪ್ಪ ಭಕ್ತರಿಗೆ ಅವಮಾನ ಮಾಡಿದ್ದಕ್ಕಾಗಿ ಇಬ್ಬರೂ ನಾಯಕರು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಇದು ಬಿಜೆಪಿ ಎಲ್ಲಾ ಕಾರ್ಯಕರ್ತರು ಮತ್ತು ಕೇರಳ-ತಮಿಳನಾಡಿನ ಹಿಂದೂಗಳಿಂದ ಪಿಣರಾಯಿ ವಿಜಯನ್ ಹಾಗೂ ಎಂಕೆ ಸ್ಟಾಲಿನ್ ಅವರಿಗೆ ಸ್ಪಷ್ಟ ಸಂದೇಶವಾಗಿದೆ. ನೀವಿಬ್ಬರೂ ಹಲವು ವರ್ಷಗಳಿಂದ ಶಬರಿಮಲೆ, ಅಯಪ್ಪ ಭಕ್ತರು ಮತ್ತು ಹಿಂದೂ ನಂಬಿಕೆಗೆ ಹಾನಿ ಮತ್ತು ಅವಮಾನ ಮಾಡಿದ್ದೀರಿ ಎಂದು ಆರೋಪಿಸಿದ್ದಾರೆ.

ಪಿಣರಾಯಿ ವಿಜಯನ್ ಅವರು ಅನೇಕ ಅಯ್ಯಪ್ಪ ಭಕ್ತರನ್ನು ಜೈಲಿಗೆ ಹಾಕಿದ್ದಾರೆ, ಇನ್ನೂ ಹಲವರ ವಿರುದ್ಧ ಕೇಸುಗಳನ್ನು ಹಾಕಿದ್ದಾರೆ, ಅಯ್ಯಪ್ಪ ಭಕ್ತರ ಮೇಲೆ ಪೊಲೀಸ್ ದೌರ್ಜನ್ಯವನ್ನು ಮಾಡಿದ್ದಾರೆ ಮತ್ತು ಶಬರಿಮಲೆಯ ಪವಿತ್ರ ಸಂಪ್ರದಾಯಗಳ ಉಲ್ಲಂಘನೆ ಮತ್ತು ಅವಮಾನಿಸಲು ಎಲ್ಲವನ್ನೂ ಮಾಡಿದ್ದಾರೆ. ಸ್ಟಾಲಿನ್ ಮತ್ತು ಅವರ ಮಗ ಪದೇ ಪದೇ ಹಿಂದುಗಳನ್ನು ಅವಮಾನಿಸಿದ್ದಾರೆ ಮತ್ತು ಇತರ ವಿಷಯಗಳ ಜೊತೆಗೆ ಹಿಂದು ನಂಬಿಕೆಯನ್ನು ವೈರಸ್ ಎಂದು ಉಲ್ಲೇಖಿಸಿದ್ದಾರೆ. ಇವುಗಳು ಪ್ರತಿಯೊಬ್ಬ ಹಿಂದುಗಳ ಸ್ಮರಣೆಯಲ್ಲಿ ಉಳಿದಿದ್ದು, ಎಂದಿಗೂ ಮರೆಯಲಾಗುವುದಿಲ್ಲ ಅಥವಾ ಕ್ಷಮಿಸುವುದಿಲ್ಲ. ಆದ್ದರಿಂದ, ಸಿಪಿಎಂ ಸರ್ಕಾರವು ಚುನಾವಣೆಗೆ ಕೆಲವು ತಿಂಗಳುಗಳ ಮೊದಲು ಆಯಪ್ಪ ಸಂಗಮ ನಡೆಸುವುದು ನಾಟಕ ಮತ್ತು ಜನರನ್ನು ಮರಳು ಮಾಡುವ ತಂತ್ರವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

ಪಿಣರಾಯಿ ವಿಜಯನ್ ಅವರು ಅಯ್ಯಪ್ಪ ಭಕ್ತರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಬೇಕು, ಜೈಲಿನಲ್ಲಿರುವವರ ಕ್ಷಮೆಯಾಚಿಸಬೇಕು ಮತ್ತು ಶಬರಿಮಲೆ ಸಂಪ್ರದಾಯಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಯ್ಯಪ್ಪ ದೇವರಲ್ಲಿ ಕ್ಷಮೆ ಕೇಳಬೇಕು ಎಂದು ಚಂದ್ರಶೇಖರ್ ಒತ್ತಾಯಿಸಿದರು. ಅದೇ ರೀತಿ, ಎಂಕೆ ಸ್ಟಾಲಿನ್ ಮತ್ತು ಅವರ ಪುತ್ರ ಉದಯನಿಧಿ ಸ್ಟಾಲಿನ್ ಅವರು ಕೇರಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಯಸಿದರೆ ಹಿಂದುಗಳ ಕ್ಷಮೆಯಾಚಿಸುವಂತೆ ಮತ್ತು ಕ್ಷಮೆ ಕೇಳುವಂತೆ ಅವರು ಕರೆ ನೀಡಿದ್ದಾರೆ.

ಇದನ್ನು ಮಾಡದೆ, ಸ್ಟಾಲಿನ್ ಅಥವಾ ಪಿಣರಾಯಿ ಶಬರಿಮಲೆ ಭಕ್ತರನ್ನು ಅಥವಾ ಅವರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಕೇರಳದ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಹೊರಬಂದು ಇದನ್ನು ವಿರೋಧಿಸುತ್ತಾರೆ. ಈ ವಿಚಾರದಲ್ಲಿ ನಮ್ಮ ಇಚ್ಛಾಶಕ್ತಿಯನ್ನು ಕಡೆಗಣಿಸಬೇಡಿ, ನಮ್ಮನ್ನು ಕೆರಳಿಸಬೇಡಿ, ಮೊದಲು ಕ್ಷಮೆ ಕೇಳಿ ನಂತರ ನಿಮ್ಮ ಅವಕಾಶವಾದಿ ರಾಜಕಾರಣ ಮಾಡಿ, ಹಿಂದುಗಳ ನಂಬಿಕೆಗೆ ಧಕ್ಕೆ ತರಲು ಬಿಜೆಪಿ ಯಾರಿಗೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!