ಭಾರತದಲ್ಲಿ “ಅತಿಥಿ ದೇವೋ ಭವ” ಎನ್ನುವ ಮಾತು ಪಾರಂಪರ್ಯವಾಗಿ ಅಳವಡಿಕೆಯಾಗಿದೆ. ಯಾವ ರಾಜ್ಯಕ್ಕೇ ಹೋದರೂ ಅತಿಥಿಗಳನ್ನು ಗೌರವದಿಂದ ಸ್ವಾಗತಿಸುವ ಸಂಪ್ರದಾಯ ನಮ್ಮ ಸಮಾಜದಲ್ಲಿ ಬೇರೂರಿದೆ. ಮನೆಯ ಬಾಗಿಲಿಗೆ ಬಂದ ಅತಿಥಿಗೆ ಮೊದಲು ನೀರು ನೀಡುವುದು ಕೇವಲ ಸಂಪ್ರದಾಯವಲ್ಲ, ವಾಸ್ತು ಶಾಸ್ತ್ರದ ಪ್ರಕಾರ ಅದರಲ್ಲಿ ಆಧ್ಯಾತ್ಮಿಕ ಹಾಗೂ ಶಕ್ತಿಯ ಅಂಶವೂ ಅಡಗಿದೆ.
ವಾಸ್ತು ಶಾಸ್ತ್ರದ ಪ್ರಕಾರ, ಅತಿಥಿ ಮನೆಗೆ ಬಂದಾಗ ಅವರಿಗೆ ನೀರು ಕೊಡದೆ, ಕೇವಲ “ಕುಡಿಯುತ್ತೀರಾ?” ಎಂದು ಕೇಳುವುದು ತಪ್ಪೆಂದು ಪರಿಗಣಿಸಲಾಗಿದೆ. ನೀರು ಕುಡಿಯದೆ ಹೊರಗೆ ಹೋಗುವ ಅತಿಥಿಯು ಕುಟುಂಬ ಸದಸ್ಯರ ಜಾತಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತಾನೆ ಎನ್ನುವ ನಂಬಿಕೆ ಇದೆ. ವಿಶೇಷವಾಗಿ, ಇಂತಹ ಸಂದರ್ಭಗಳಲ್ಲಿ ರಾಹು ಗ್ರಹ ದುರ್ಬಲವಾಗುತ್ತದೆಯೆಂಬ ನಂಬಿಕೆಯಿದೆ. ಇದರಿಂದ ಮಾನಸಿಕ ಆತಂಕ, ಕುಟುಂಬ ಕಲಹ, ಅನುಮಾನಗಳು ಹಾಗೂ ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಮತ್ತೊಂದು ಮಹತ್ವದ ನಿಯಮವೆಂದರೆ, ಅತಿಥಿಯು ಕುಡಿದ ನೀರಿನ ಉಳಿಕೆ ಮನೆಯಲ್ಲಿ ಬಳಸಬಾರದು. ಏಕೆಂದರೆ, ಅತಿಥಿಯ ನಕಾರಾತ್ಮಕ ಶಕ್ತಿಯು ಆ ನೀರಿನಲ್ಲಿ ಸೇರಿರುವ ಸಾಧ್ಯತೆಯಿದೆ. ಅದನ್ನು ಯಾರಾದರೂ ಮತ್ತೆ ಬಳಸಿದರೆ, ಆ ಶಕ್ತಿ ಮನೆ ಸದಸ್ಯರಿಗೂ ಪರಿಣಾಮ ಬೀರುತ್ತದೆ. ಆದ್ದರಿಂದ, ಅತಿಥಿ ಕುಡಿದು ಬಿಟ್ಟ ಉಳಿಕೆ ನೀರನ್ನು ಗಿಡಗಳಿಗೆ ಸುರಿಸುವುದು ಅಥವಾ ಹೊರಗೆ ಹಾಕುವುದು ಶ್ರೇಯಸ್ಕರ.