ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾಶಿವರಾತ್ರಿಯ ಪವಿತ್ರ ಸಂದರ್ಭದಲ್ಲಿ ಬೀದರ್ ಜಿಲ್ಲೆಯ ಐತಿಹಾಸಿಕ ಪಾಪನಾಶ ಶಿವಲಿಂಗ ದರ್ಶನಕ್ಕೆ ಭಕ್ತಸಾಗರವೇ ಹರಿದುಬಂದಿದೆ. ತ್ರೇತಾಯುಗದಲ್ಲಿ ಸ್ವತಃ ಶ್ರೀರಾಮಚಂದ್ರನೇ ಪ್ರತಿಷ್ಠಾಪಿಸಿದ ಈ ಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಕೆಯಾಗುತ್ತಿದ್ದು, ಅಕ್ಷರಶಃ ಭಕ್ತಿಯ ಮಹಾಪೂರವೇ ಹರಿಯುತ್ತಿದೆ.
ವನವಾಸದ ಸಮಯದಲ್ಲಿ ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರು ಇಲ್ಲಿ ತಂಗಿದ್ದರು ಎಂಬ ಐತಿಹ್ಯವಿದೆ. ಶ್ರೀರಾಮ ತನ್ನ ಕೈಯಾರೆ ಈ ಶಿವಲಿಂಗವನ್ನು ಪ್ರತಿಷ್ಠಾಪಿಸಿದ್ದರಿಂದ ಇದಕ್ಕೆ ‘ಪಾಪನಾಶ’ ಎಂಬ ಹೆಸರು ಬಂದಿದೆ. ಈ ದೈವಿಕ ಹಿನ್ನೆಲೆಯೇ ಇಂದು ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರನ್ನು ಇಲ್ಲಿಗೆ ಕೈಬೀಸಿ ಕರೆಯುತ್ತಿದೆ.
ಶಿವನ ದರ್ಶನಕ್ಕಾಗಿ ಭಕ್ತರು ಒಂದರಿಂದ ಎರಡು ಕಿಲೋಮೀಟರ್ವರೆಗೆ ಸಾಲುಗಟ್ಟಿ ನಿಂತಿದ್ದಾರೆ. ಮುಂಜಾನೆಯಿಂದಲೇ ನಾಲ್ಕೈದು ಸಾಲುಗಳಲ್ಲಿ ಭಕ್ತರು ಕಾಯುತ್ತಿದ್ದು, ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಹರಹರ ಮಹಾದೇವ ಎಂಬ ಘೋಷಣೆಗಳ ನಡುವೆ ಭಕ್ತರು ಅತ್ಯಂತ ತಾಳ್ಮೆಯಿಂದ ಶಿವನ ಕೃಪೆಗೆ ಪಾತ್ರರಾಗುತ್ತಿದ್ದಾರೆ.



