ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಅಂಗಳದಲ್ಲಿ ಸದ್ಯ ರಣ್ವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರದ ಅಬ್ಬರ ಜೋರಾಗಿದೆ. ಬಾಕ್ಸ್ ಆಫೀಸ್ ಇತಿಹಾಸವನ್ನೇ ತಿರುಗಿಬರೆಯುತ್ತಿರುವ ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ ನಿರ್ವಹಿಸಿರುವ ‘ರಹಮಾನ್ ಡಕೈತ್’ ಎಂಬ ವಿಲನ್ ಪಾತ್ರ ಈಗ ಟಾಕ್ ಆಫ್ ದಿ ಟೌನ್. ಈ ಪವರ್ಫುಲ್ ಪಾತ್ರ ಮೊದಲು ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರಿಗೆ ಆಫರ್ ಮಾಡಲಾಗಿತ್ತು ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಆದರೆ, ಈಗ ಸ್ವತಃ ನಾಗಾರ್ಜುನ ಅವರೇ ಈ ಬಗ್ಗೆ ಮೌನ ಮುರಿದಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಈ ವದಂತಿಗಳ ಬಗ್ಗೆ ಮಾತನಾಡಿದ ಅವರು, “ನನಗೆ ಈ ಸಿನಿಮಾದ ಆಫರ್ ಬಂದಿರಲಿಲ್ಲ. ಆದರೆ ಅಕ್ಷಯ್ ಖನ್ನಾ ಮಾಡಿರುವ ಆ ಅದ್ಭುತ ಪಾತ್ರ ನನಗೆ ಸಿಗಬೇಕಿತ್ತು ಎಂದು ಈಗ ಅನಿಸುತ್ತಿದೆ. ನಿರ್ದೇಶಕ ಆದಿತ್ಯ ಧರ್ ಅವರ ಮೇಕಿಂಗ್ ಶೈಲಿ ಹಾಗೂ ಚಿತ್ರದ ಪ್ರತಿಯೊಬ್ಬರ ನಟನೆ ನನಗೆ ತುಂಬಾ ಇಷ್ಟವಾಯಿತು” ಎಂದು ಮುಕ್ತವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಮೂಲಕ ತಮಗೆ ಆಫರ್ ಬಂದಿತ್ತು ಎನ್ನುವ ಸುದ್ದಿಯನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ನಾಗಾರ್ಜುನ ಅವರು ಇತ್ತೀಚೆಗೆ ಪ್ರಾಯೋಗಿಕ ಪಾತ್ರಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ರಜನಿಕಾಂತ್ ಅವರ ‘ಕೂಲಿ’ ಸಿನಿಮಾದಲ್ಲಿ ನೆಗೆಟಿವ್ ಶೇಡ್ ಹಾಗೂ ಧನುಶ್ ಅಭಿನಯದ ‘ಕುಬೇರ’ ಚಿತ್ರದಲ್ಲಿನ ಪ್ರಮುಖ ಪಾತ್ರಗಳನ್ನು ನೋಡಿದ ಪ್ರೇಕ್ಷಕರು, ಬಹುಶಃ ‘ಧುರಂಧರ್’ ಸಿನಿಮಾದ ವಿಲನ್ ಪಾತ್ರಕ್ಕೂ ನಾಗಾರ್ಜುನ ಸೂಕ್ತ ಎಂದು ಭಾವಿಸಿ ಈ ಸುದ್ದಿಯನ್ನು ಹಬ್ಬಿಸಿದ್ದರು.



