ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಮಯಾನ ಕೊಳ್ಳೈ ಹಬ್ಬದ ಸಂದರ್ಭದಲ್ಲಿ ಭಾರಿ ಅವಘಡ ಸಂಭವಿಸಿದೆ. ನಿನ್ನೆ ರಾತ್ರಿ ನಡೆದ ಮೆರವಣಿಗೆಯ ವೇಳೆ ಸುಮಾರು ಅರವತ್ತು ಅಡಿ ಎತ್ತರದ ದೇವಾಲಯದ ರಥ ಅಚಾನಕ್ ಕುಸಿದು ಬಿದ್ದ ಪರಿಣಾಮ ಕನಿಷ್ಠ ಏಳು ಮಂದಿ ಗಾಯಗೊಂಡಿದ್ದಾರೆ.
ಸಾವಿರಾರು ಭಕ್ತರು ಹಬ್ಬ ವೀಕ್ಷಿಸಲು ಸೇರಿದ್ದ ವೇಳೆ ಈ ಘಟನೆ ನಡೆದಿದ್ದು, ಕ್ಷಣಾರ್ಧದಲ್ಲಿ ಸಂಭ್ರಮ ಭೀತಿಯ ವಾತಾವರಣಕ್ಕೆ ತಿರುಗಿತು. ಗಾಯಾಳುಗಳಿಗೆ ತಕ್ಷಣವೇ ಪೊಲೀಸರು, ರಕ್ಷಣಾ ಸಿಬ್ಬಂದಿ ಹಾಗೂ ಸ್ಥಳೀಯರು ನೆರವಾಗಿದ್ದು, ಪರಿಸ್ಥಿತಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲಾಗಿದೆ.
ಇದನ್ನೂ ಓದಿ:
ಕುಸಿದ ರಥದ ಮರ ಹಾಗೂ ಲೋಹದ ಭಾಗಗಳು ರಸ್ತೆಯಾದ್ಯಂತ ಚದುರಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದ ಕೆಲಕಾಲ ಸಂಚಾರಕ್ಕೂ ಅಡಚಣೆ ಉಂಟಾಯಿತು. ಶಿವರಾತ್ರಿಯ ನಂತರ ಆಚರಿಸಲಾಗುವ ಈ ಹಬ್ಬದಲ್ಲಿ ದೇವಿಯ ಮೂರ್ತಿಯನ್ನು ಭವ್ಯ ರಥದಲ್ಲಿ ಇರಿಸಿ ಊರಿನ ಬೀದಿಗಳ ಮೂಲಕ ಮೆರವಣಿಗೆ ನಡೆಸುವ ಸಂಪ್ರದಾಯ ಇದೆ.
ರಥದ ಹೆಚ್ಚಿನ ಎತ್ತರ ಮತ್ತು ಭಾರೀ ಅಲಂಕಾರವೇ ಕುಸಿತಕ್ಕೆ ಕಾರಣವಾಗಿರಬಹುದೆಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ.



