ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಇಂದು ಎಲ್ಲ ಕ್ಷೇತ್ರದಲ್ಲೂ ಕೃತಕ ಬುದ್ದಿ ಮತ್ತೆ (ಎಐ) ಛಾಪುಮೂಡಿಸಿದ್ದು, ಇದೀಗ ಮೊದಲ ಬಾರಿಗೆ ದೇಶದ ಗಡಿ ನಿಯಂತ್ರಣ ರೇಖೆ ಬಳಿ ಭದ್ರತಾ ಕಾರ್ಯಕ್ಕಾಗಿ ಭಾರತ ಕೃತಕ ಬುದ್ದಿ ಮತ್ತೆ ಸಾಧನ ಬಳಸಲು ಮುಂದಾಗಿದೆ.
ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆಯ ಉದ್ದಕ್ಕೂ ಚೀನಾದ ನಡೆ ಮೇಲೆ ಹೆಚ್ಚಿನ ನಿಗಾ ಇರಿಸುವ ಉದ್ದೇಶದಿಂದ ಭಾರತೀಯ ಸೇನೆ ಎಐ ಚಾಲಿತ ಭವಿಷ್ಯ ಸಾಧನಗಳನ್ನು ಬಳಸಿದೆ ಎಂದು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ನ ಕಮಾಂಡರ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ದಿನೇಶ್ ಸಿಂಗ್ ರಾಣಾ ತಿಳಿಸಿದ್ದಾರೆ.
ಈ ಕುರಿತು ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ ಮಾತನಾಡಿದ ಅವರು, ಅರುಣಾಚಲ ಪ್ರದೇಶದ ಗಡಿ ನಿಯಂತ್ರಣ ರೇಖೆಯ ಬಳಿ ಎಐ ವ್ಯವಸ್ಥೆ ಬಳಕೆಯಿಂದ ಯಾವ ರೀತಿ ಚೀನಾದ ಮಿಲಿಟರಿ ಸ್ಥಾಪನೆಗೂ ಮುಂಚಿತವಾಗಿಯೇ ಅಲರ್ಟ್ ಆಗಿರಲು ಸಹಾಯವಾಗಲಿದ್ದು, ಜೊತೆಗೆ ಗಡಿ ಭಾಗದಲ್ಲಿ ಏನೆಲ್ಲಾ ನಡೆಯುತ್ತಿದೆ ಎಂಬುದನ್ನು ನಾವು ನೋಡಬಹುದು ಎಂದು ತಿಳಿಸಿದರು.
ಅದೇ ರೀತಿ ಸೈಬರ್ ಡೊಮೇನ್ನಲ್ಲಿ ಎಐ ಚಾಲಿತ ವ್ಯವಸ್ಥೆಗಳು ಅತ್ಯಾಧುನಿಕ ಆಕ್ರಮಣಕಾರಿ ಕಾರ್ಯಾಚರಣೆಗಳನ್ನು ನಡೆಸಬಹುದು ಮತ್ತು ಜೊತೆಗೆ ದೌರ್ಬಲ್ಯಗಳನ್ನು ಗುರುತಿಸುವ ಮೂಲಕ ರಕ್ಷಣಾತ್ಮಕ ಸಾಮರ್ಥ್ಯಗಳನ್ನು ಬಲಪಡಿಸಬಹುದು ಎಂದು ಅವರು ತಿಳಿಸಿದರು.
ಕೇವಲ ಸಹಾಯವಾಗುವುದು ಮಾತ್ರವಲ್ಲದೆ ಎಐಯು ಅವಕಾಶಗಳು ಮತ್ತು ಸವಾಲುಗಳು ಎರಡನ್ನೂ ತರುತ್ತವೆ. ಇದು ಪರಮಾನಿಗಿಂತಲೂ ಹೆಚ್ಚು ಅಪಾಯಕಾರಿಯಾಗಿದೆ. ಹೀಗಾಗಿ ಉನ್ನತ ಮಟ್ಟದ ಸಾಮರ್ಥ್ಯಗಳನ್ನು ಮಾತ್ರ ಅವಲಂಬಿಸುವ ಬದಲು ಸ್ವಾಯತ್ತ ಡ್ರೋನ್ಗಳು ಸೇರಿದಂತೆ ಸ್ಕೇಲೆಬಲ್, ಕಡಿಮೆ ವೆಚ್ಚದ ಎಐ ಯುದ್ಧಭೂಮಿ ವ್ಯವಸ್ಥೆಗಳ ಮೇಲೆ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು.
ಪರಮಾಣು ಶಕ್ತಿಯಂತೆ ಜವಾಬ್ದಾರಿಯುತ ಎಐ ಶಕ್ತಿಯೂ ಆಗಬೇಕು. ಎಐ ಸಾಮರ್ಥ್ಯಗಳನ್ನು ಜವಾಬ್ದಾರಿಯುತವಾಗಿ ಬಳಸಬೇಕು ಆಗ ಅದರ ಉಪಯೋಗ ಸೂಕ್ತ ರೀತಿಯಲ್ಲಿ ಆಗಲಿದೆ ಎಂದು ಹೇಳಿದರು.



