ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಗಂಭೀರ ಲೋಪದೋಷಗಳ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಚುನಾವಣಾ ಆಯೋಗಕ್ಕೆ ಸುದೀರ್ಘ ಪತ್ರ ಬರೆದಿದ್ದಾರೆ.
ಪಟ್ಟಿಯನ್ನು ಸಮರ್ಪಕವಾಗಿ ಸರಿಪಡಿಸಲು ಬೀದಿ ಹಾಗೂ ಮನೆಗಳ ಆಧಾರದ ಮೇಲೆ ಮ್ಯಾಪಿಂಗ್ ಪ್ರಕ್ರಿಯೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿನ ಸದ್ಯದ ಗೊಂದಲಗಳು ಕೇವಲ ತಾಂತ್ರಿಕ ತಪ್ಪುಗಳಲ್ಲ, ಬದಲಿಗೆ ವ್ಯವಸ್ಥಿತವಾಗಿ ನಡೆದ ಸಂಚು ಎಂದು ಡಿಕೆಶಿ ಆರೋಪಿಸಿದ್ದಾರೆ. ಒಂದೇ ಮನೆಯ ಸದಸ್ಯರ ಹೆಸರುಗಳನ್ನು ವಿಭಿನ್ನ ವಾರ್ಡ್ಗಳಿಗೆ ಹಂಚಿರುವುದು, ವಿಳಾಸಗಳಲ್ಲಿನ ತಪ್ಪು ಮಾಹಿತಿ, ಮತ್ತು ಅರ್ಹ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆಯುಂಟು ಮಾಡಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಅಸ್ತವ್ಯಸ್ತತೆಯನ್ನು ಹೋಗಲಾಡಿಸಿ ಪಾರದರ್ಶಕತೆ ಕಾಯ್ದುಕೊಳ್ಳಲು ‘ಮನೆ-ಮನೆ ಮ್ಯಾಪಿಂಗ್’ ಅನಿವಾರ್ಯವೆಂದು ಅವರು ಆಯೋಗಕ್ಕೆ ಆಗ್ರಹಿಸಿದ್ದಾರೆ.



