ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್-8 ಹಂತದ ಪಂದ್ಯಗಳು ಆರಂಭವಾಗುತ್ತಿದ್ದಂತೆ ಟಿ20 ವಿಶ್ವಕಪ್ 2026 ರೋಚಕ ತಿರುವು ಪಡೆದುಕೊಂಡಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಭಾರತ–ದಕ್ಷಿಣ ಆಫ್ರಿಕಾ ಪಂದ್ಯಕ್ಕೂ ಮುನ್ನವೇ ಮಾತಿನ ಸಮರ ಜೋರಾಗಿದೆ. ದಕ್ಷಿಣ ಆಫ್ರಿಕಾ ಕೋಚ್ ಶುಕ್ರಿ ಕಾನ್ರಾಡ್ ನೀಡಿರುವ ಹೇಳಿಕೆ ಇದೀಗ ಚರ್ಚೆಗೆ ಗ್ರಾಸವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಮೊದಲ ಸುತ್ತಿನಲ್ಲಿ ಬಲಿಷ್ಠ ತಂಡಗಳನ್ನು ಎದುರಿಸಿಲ್ಲ ಎಂದು ಅಭಿಪ್ರಾಯಪಟ್ಟರು. ಈಗ ದಕ್ಷಿಣ ಆಫ್ರಿಕಾ ವಿರುದ್ಧ ಕಣಕ್ಕಿಳಿಯುವಾಗ ಭಾರತ ಹೆಚ್ಚು ಒತ್ತಡಕ್ಕೆ ಒಳಗಾಗಲಿದೆ ಎಂದರು. ಹಾಲಿ ಚಾಂಪಿಯನ್ ಮತ್ತು ಆತಿಥೇಯ ರಾಷ್ಟ್ರವಾಗಿರುವ ಭಾರತ ಮೇಲೆ ಭಾರಿ ನಿರೀಕ್ಷೆ ಇದೆ, ಆ ಒತ್ತಡವನ್ನೇ ನಾವು ಬಳಸಿಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ:
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಲಕ್ಷಾಂತರ ಅಭಿಮಾನಿಗಳ ಮುಂದೆ ಆಡುವುದು ಶಕ್ತಿಯ ಜೊತೆಗೆ ಹೊರೆ ಕೂಡ ಆಗಬಹುದು ಎಂದು ಕಾನ್ರಾಡ್ ಅಭಿಪ್ರಾಯಪಟ್ಟರು.
ಇದಕ್ಕೂ ಮುನ್ನ 2025ರ ಟೆಸ್ಟ್ ಸರಣಿಯಲ್ಲಿಯೂ ಇದೇ ರೀತಿಯ ಹೇಳಿಕೆ ನೀಡಿ ಅವರು ಚರ್ಚೆಗೆ ಗ್ರಾಸರಾಗಿದ್ದರು. ಇದೀಗ ಮತ್ತೊಮ್ಮೆ ಭಾರತ ವಿರುದ್ಧ ‘ಮೈಂಡ್ ಗೇಮ್’ ಆರಂಭಿಸಿರುವುದು ಸ್ಪಷ್ಟವಾಗಿದ್ದು, ಕಾದಾಟಕ್ಕೂ ಮುನ್ನವೇ ಪಂದ್ಯ ರೋಚಕತೆ ಹೆಚ್ಚಿಸಿದೆ.



