ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ನ ಅಸಲಿ ಆಟಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರದಿಂದ ಆರಂಭವಾಗಲಿರುವ ಹೈ-ವೋಲ್ಟೇಜ್ ‘ಸೂಪರ್-8’ ಹಂತದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಮುನ್ನಡೆಯಲು ಭಾರತಕ್ಕೆ ಪ್ರತಿಯೊಂದು ಪಂದ್ಯವೂ ‘ಮಾಡು ಇಲ್ಲವೇ ಮಡಿ’ ಎಂಬಂತಾಗಿದೆ. ಆದರೆ, ಇಂತಹ ನಿರ್ಣಾಯಕ ಸಮಯದಲ್ಲಿ ಟೀಮ್ ಇಂಡಿಯಾವನ್ನು ಗಾಯದ ಸಮಸ್ಯೆ ಬೆನ್ನಟ್ಟುತ್ತಿರುವುದು ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕಾಗಿ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡ ತೀವ್ರ ಅಭ್ಯಾಸ ನಡೆಸುತ್ತಿದೆ. ಶುಕ್ರವಾರ ಸಂಜೆ ನೆಟ್ಸ್ನಲ್ಲಿ ಬೌಲಿಂಗ್ ಮಾಡುತ್ತಿದ್ದ ವೇಗಿ ಮೊಹಮ್ಮದ್ ಸಿರಾಜ್ ಅವರಿಗೆ ಹಾರ್ದಿಕ್ ಪಾಂಡ್ಯ ಹೊಡೆದ ಬಲವಾದ ಚೆಂಡು ನೇರವಾಗಿ ಎಡಗಾಲಿನ ಮೊಣಕಾಲಿಗೆ ಬಡಿದಿದೆ. ತೀವ್ರ ನೋವಿನಿಂದ ಬಳಲಿದ ಸಿರಾಜ್, ಕೂಡಲೇ ಅಭ್ಯಾಸ ಕೈಬಿಟ್ಟು ನೆಟ್ಸ್ನಿಂದ ಹೊರನಡೆದಿದ್ದಾರೆ.
ಪ್ರಸಕ್ತ ಟೂರ್ನಿಯಲ್ಲಿ ಅಮೆರಿಕ ವಿರುದ್ಧದ ಪಂದ್ಯದಲ್ಲಿ 3 ವಿಕೆಟ್ ಕಿತ್ತು ಭರವಸೆ ಮೂಡಿಸಿದ್ದ ಸಿರಾಜ್, ತಂಡದ ಪ್ರಮುಖ ವೇಗದ ಅಸ್ತ್ರ. ಒಂದು ವೇಳೆ ಭಾನುವಾರದ ಪಂದ್ಯಕ್ಕೆ ಸಿರಾಜ್ ಅಲಭ್ಯರಾದರೆ, ಅರ್ಷ್ದೀಪ್ ಸಿಂಗ್ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಬಲಿಷ್ಠ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಬೌಲಿಂಗ್ ವಿಭಾಗ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದು ಈಗ ಕುತೂಹಲ ಮೂಡಿಸಿದೆ.



