ಹೊಸದಿಗಂತ ವರದಿ,ಚಿತ್ರದುರ್ಗ :
ಚಿತ್ರದುರ್ಗ ನಗರದ ಮೂರು ಜನ ಯುವತಿಯರು ಜೈನ ಮುನಿಗಳಾಗಿ ಫೆ.೨೫ ರಂದು ಸನ್ಯಾಸ ದೀಕ್ಷೆ ಪಡೆಯಲು ಮುಂದಾಗಿದ್ದಾರೆ.
ಮಾಗಿಲಾಲ್ ಸುಖಿಬಾಯಿ ಅವರ ಪುತ್ರಿ ಸವಿತಾ ಕುಮಾರಿ, ಲಲಿತಾ ಕುಮಾರ್ ಜೀ ಮತ್ತು ಸುಶೀಲಾ ಬೆಹನ್ ಅವರ ಪುತ್ರಿಯರಾದ ಛವಿ ಕುಮಾರಿ ಮತ್ತು ದಿವ್ಯಾ ಕುಮಾರಿ ಇಂತಹ ತೀರ್ಮಾನಕ್ಕೆ ಬಂದಿದ್ದಾರೆ.
ಇವರು ಚಿತ್ರದುರ್ಗದಲ್ಲಿಯೇ ವಿದ್ಯಾಭ್ಯಾಸ ಮಾಡಿ ಈಗ ಜೈನ ಮುನಿಗಳಾಗುತ್ತಿದ್ದಾರೆ. ಇದುವರೆವಿಗೂ ಚಿತ್ರದುರ್ಗದಲ್ಲಿ ಮಹಿಳೆ ಹಾಗೂ ಪುರುಷರು ಸೇರಿದಂತೆ ೧೧ ಜನ ಜೈನ ಮುನಿಗಳಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸವಿತಾ ಕುಮಾರಿ, ನನಗೆ ಬಾಹ್ಯ ಪ್ರಪಂಚದಲ್ಲಿ ಇರುವ ಸುಖಕ್ಕಿಂತ ಮುನಿಗಳಾಗಿ ಇರುವ ಸುಖವೇ ಶ್ರೇಷ್ಠ. ಹಾಗಾಗಿ ನಾನು ಜೈನ ಮುನಿಯಾಗಿ ಸನ್ಯಾಸತ್ವ ಸ್ವೀಕರಿಸಲು ಮುoದಾಗಿದ್ದೇನೆ. ನನಗೆ ಈ ಆಡಂಬರ, ವೈಭವ, ಸುಖ, ಸಂತೋಷಕ್ಕಿಂತ ಭಗವಂತನ ಸೇವೆ ಮಾಡುವುದು ಇಷ್ಟ. ಈ ಹಿನ್ನೆಲೆಯಲ್ಲಿ ನಾನು ಜೈನ ಮುನಿಯಾಗಲು ಬಯಸಿದ್ದೇನೆ ಎಂದರು.
ಈ ಮೂರು ಜನರಿಗೆ ಫೆ.೨೫ರ ಬೆಳಿಗ್ಗೆ ೯ ಗಂಟೆಗೆ ಆಭಯ ಶೇಖರ್ ಸುರೇಶ್ವರಜೀ ತಾರಕೇಶ್ವರ ಗುರುಗಳು ದೀಕ್ಷೆ ನೀಡಲಿದ್ದಾರೆ. ಫೆ.೨೪ ರಂದು ಚಿತ್ರದುರ್ಗ ನಗರದಲ್ಲಿ ಜೈನ ಮುನಿಗಳಾಗುತ್ತಿರುವ ಈ ಮೂರು ಜನ ಯುವತಿಯರ ಮೆರವಣಿಗೆ ನಡೆಸಲಾಗುವುದು. ಇದಾದ ಮೇಲೆ ವಾಲ್ಮೀಕಿ ಭವನದಲ್ಲಿ ದೀಕ್ಷಾ ಕಾರ್ಯಕ್ರಮ ನಡೆಯಲಿದೆ.



