ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 61ನೇ ಅಧಿವೇಶನವು ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಯಿತು. ಜಮ್ಮು ಮತ್ತು ಕಾಶ್ಮೀರದ ಕುರಿತು ಪಾಕಿಸ್ತಾನ ಹರಡುತ್ತಿರುವ ಸುಳ್ಳು ಪ್ರಚಾರವನ್ನು ಭಾರತದ ಪ್ರತಿನಿಧಿ ಅನುಪಮಾ ಸಿಂಗ್ ಅವರು ಕಟುವಾದ ಶಬ್ದಗಳಿಂದ ಖಂಡಿಸಿದರು.
“ಪಾಕಿಸ್ತಾನವು ಭ್ರಮೆಯಲ್ಲಿದೆ ಎಂದು ನಮಗೆ ಅನ್ನಿಸುತ್ತಿದೆ. ಐಎಂಎಫ್ನಿಂದ ಬೇಡುವ ಸಾಲದ ಮೊತ್ತಕ್ಕಿಂತಲೂ ಹೆಚ್ಚಿನ ಹಣವನ್ನು ನಾವು ಕಾಶ್ಮೀರದ ಅಭಿವೃದ್ಧಿಗೆ ವ್ಯಯಿಸುತ್ತಿದ್ದೇವೆ,” ಎಂದು ಹೇಳುವ ಮೂಲಕ ಪಾಕಿಸ್ತಾನದ ಆರ್ಥಿಕ ದುಸ್ಥಿತಿಯನ್ನು ಅವರು ಜಾಗತಿಕ ವೇದಿಕೆಯಲ್ಲಿ ನೆನಪಿಸಿದರು. ವಿಶ್ವದ ಅತಿ ಎತ್ತರದ ಚೆನಾಬ್ ರೈಲು ಸೇತುವೆಯನ್ನು ನಕಲಿ ಎನ್ನುವ ಪಾಕಿಸ್ತಾನದ ಪ್ರಚಾರವು ಕೇವಲ ಅವರ ಹತಾಶೆಯನ್ನು ತೋರಿಸುತ್ತದೆ ಎಂದು ಅನುಪಮಾ ಸಿಂಗ್ ವಾಗ್ದಾಳಿ ನಡೆಸಿದರು.
ಕೊನೆಯಲ್ಲಿ, ಕಾಶ್ಮೀರದ ವಿಲೀನವು ಅಂತರರಾಷ್ಟ್ರೀಯ ಕಾನೂನಿನ ಚೌಕಟ್ಟಿನಲ್ಲೇ ನಡೆದಿದ್ದು, ಅದು ಬದಲಾಯಿಸಲಾಗದ ಸತ್ಯ ಎಂದು ಭಾರತ ತನ್ನ ನಿಲುವನ್ನು ಮತ್ತೊಮ್ಮೆ ವಿಶ್ವಕ್ಕೆ ಸಾರಿತು.



