ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರನ್ನು ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಜೊತೆಗೆ ಹೋಲಿಕೆ ಮಾಡಿದ ಆರೋಪದ ಮೇರೆಗೆ ಹರಿಯಾಣದ ಸೋನಿಪತ್ನ ಒಪಿ ಜಿಂದಾಲ್ ಗ್ಲೋಬಲ್ ಯೂನಿವರ್ಸಿಟಿಯ ಸಹ ಪ್ರಾಧ್ಯಾಪಕರೊಬ್ಬರನ್ನು ಒಂದು ಸೆಮಿಸ್ಟರ್ ಅವಧಿಗೆ ಅಮಾನತುಗೊಳಿಸಲಾಗಿದೆ.
ವಿದ್ಯಾರ್ಥಿಯೊಬ್ಬನ ತಂದೆ ಹರಿಯಾಣ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದು, ಇದಾದ ಬಳಿಕ ಅಧ್ಯಾಪಕನನ್ನು ಅಮಾನತುಗೊಳಿಸಲಾಗಿದೆ.
ಕಳೆದ ವರ್ಷ ಅಕ್ಟೋಬರ್ 31 ರಂದು ‘ಉರಿ ಸರ್ಜಿಕಲ್ ಸ್ಟ್ರೈಕ್’ ಕುರಿತು ನನ್ನ ಮಗ ಪ್ರಬಂಧ ಬರೆದಿದ್ದ. ಆದ್ರೆ ಇದನ್ನು ಓದಿದ ವಿಶ್ವವಿದ್ಯಾಲಯದ ಅಧ್ಯಾಪಕರಿಗೆ ಇಷ್ಟವಾಗಿರಲಿಲ್ಲ. ಹೀಗಾಗಿ ತರಗತಿ ವೇಳೆ ನನ್ನ ಮಗನಿಗೆ ಕಿರುಕುಳ ನೀಡಲಾಗಿದೆ. ಜೊತೆಗೆ ಸಹಾಯಕ ಪ್ರಾಧ್ಯಾಪಕರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್ ಅವರೊಂದಿಗೆ ಹೋಲಿಸಿದ್ದಾರೆ. ಅಲ್ಲದೇ ಸರ್ಜಿಕಲ್ ಸ್ಟ್ರೈಕ್ ನ್ನು ರಾಜಕೀಯ ಗಿಮ್ಮಿಕ್ ಎಂದು ಲೇವಡಿ ಮಾಡಿದ್ದಾರೆ ಎಂದು ವಿದ್ಯಾರ್ಥಿ ವಿಖ್ಯಾತ್ ಬಜಾಜ್ ಅವರ ತಂದೆ ವಿಶ್ವ್ ಬಜಾಜ್ ದೂರಿನಲ್ಲಿ ತಿಳಿಸಿದ್ದಾರೆ.
ಇದಾದ ಬಳಿಕ ತನ್ನ ಮಗ ಕಾಲೇಜಿನಲ್ಲಿ ನಿರಂತರ ಕಿರುಕುಳ, ಅವಮಾನ ಮತ್ತು ತಾರತಮ್ಯ ವರ್ತನೆಗೆ ಒಳಗಾಗಿದ್ದಾನೆ. ಇದರಿಂದ ಆತನ ಮಾನಸಿಕ ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿದೆ ಎಂದು ತಂದೆ ಆರೋಪಿಸಿದ್ದಾರೆ.
ಇನ್ನು ಈ ಘಟನೆ ಕುರಿತು HHRC ಸೋನಿಪತ್ ಪೊಲೀಸ್ ಕಮಿಷನರ್ ಮತ್ತು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಅವರಿಂದ ವರದಿಗಳನ್ನು ಕೇಳಿದೆ. ಈ ವಿಚಾರದಲ್ಲಿ ಮೇ 13ರಂದು ಖುದ್ದು ಹಾಜರಾಗುವಂತೆ ಅಥವಾ ಬೇರೆ ಹಿರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಎಚ್ಎಚ್ಆರ್ಸಿ ರಿಜಿಸ್ಟ್ರಾರ್ಗೆ ಸೂಚಿಸಿದೆ.



