ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ನಿಧನರಾದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಉತ್ತರಕ್ರಿಯೆ ಇಂದು ಅವರ ಸ್ವಗ್ರಾಮದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿದವು. ಈ ಸಂದರ್ಭದಲ್ಲಿ ತಮ್ಮ ಧರ್ಮಪತ್ನಿಯ ಸಮಾಧಿಯ ಮುಂದೆ ನಿಂತು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಳೆಯ ನೆನಪುಗಳನ್ನು ಮೆಲುಕುಹಾಕುತ್ತಾ ಕಣ್ಣೀರಿಟ್ಟ ಭಾವುಕ ಸನ್ನಿವೇಶ ನೆರೆದಿದ್ದವರ ಕಣ್ಣಾಲಿಗಳನ್ನು ತುಂಬಿಸಿತು.
ಕುಟುಂಬಸ್ಥರಿಂದ ಶಾಸ್ತ್ರೋಕ್ತವಾಗಿ ನಡೆದ ವಿಧಿವಿಧಾನ:
ದೊಡ್ಡಗೌಡರ ಕುಟುಂಬದ ಹಿರಿಯರಾದ ಚೆನ್ನಮ್ಮ ಅಗಲಿಕೆಯಿಂದ ಶೋಕತಪ್ತವಾಗಿರುವ ಹೆಚ್.ಡಿ. ದೇವೇಗೌಡರ ಇಡೀ ಕುಟುಂಬ ಇಂದು ಉತ್ತರಕ್ರಿಯಾದಿ ಕಾರ್ಯಗಳಲ್ಲಿ ಭಾಗವಹಿಸಿತ್ತು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸೇರಿದಂತೆ ಕುಟುಂಬದ ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಉಪಸ್ಥಿತರಿದ್ದು, ತಾಯಿಯ ಆತ್ಮಕ್ಕೆ ಸದ್ಗತಿ ಕೋರಿ ಧಾರ್ಮಿಕ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ಇದನ್ನೂ ಓದಿ;
ಸಮಾಧಿ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಗೌಡರು:
ಸುದೀರ್ಘ ದಶಕಗಳ ಕಾಲ ತಮ್ಮ ಸುಖ-ದುಃಖ, ರಾಜಕೀಯ ಏರಿಳಿತ ಹಾಗೂ ಕಠಿಣ ದಿನಗಳಲ್ಲಿ ನೆರಳಿನಂತೆ ಜೊತೆಯಾಗಿದ್ದ ಪತ್ನಿಯನ್ನು ಕಳೆದುಕೊಂಡ ಹೆಚ್.ಡಿ. ದೇವೇಗೌಡರು ಇಳಿವಯಸ್ಸಿನಲ್ಲೂ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಇಂದು ಸಮಾಧಿಗೆ ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸುವಾಗ ತಮ್ಮ ಭಾವನೆಗಳನ್ನು ನಿಯಂತ್ರಿಸಲಾಗದೇ ಅವರು ಬಿಕ್ಕಿ ಬಿಕ್ಕಿ ಅತ್ತರು. ಕುಮಾರಸ್ವಾಮಿ ಹಾಗೂ ರೇವಣ್ಣ ತಂದೆಯನ್ನು ತಬ್ಬಿಕೊಂಡು ಸಮಾಧಾನಪಡಿಸಲು ಯತ್ನಿಸಿದ ದೃಶ್ಯ ಅತ್ಯಂತ ಮನಕರಗುವಂತಿತ್ತು.



