ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯಾದ್ಯಂತ ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಗಳು ಆರಂಭವಾಗಿದ್ದು, ಲಕ್ಷಾಂತರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಆದರೆ, ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಮಾತ್ರ ಮೌನ ಆವರಿಸಿದೆ.
ಪರೀಕ್ಷೆಗೆ ಸಜ್ಜಾಗಿದ್ದ ಪ್ರತಿಭಾವಂತ ವಿದ್ಯಾರ್ಥಿನಿ ಭೂಮಿಕಾ ಮಾಳಂಗಿ (17) ಹೃದಯಾಘಾತದಿಂದ ಸಾವನ್ನಪ್ಪುವ ಮೂಲಕ ದುರಂತ ಅಂತ್ಯ ಕಂಡಿದ್ದಾರೆ.
ಭೂಮಿಕಾ ಇಂದು ನಡೆಯಲಿರುವ ಮೊದಲ ಪರೀಕ್ಷೆಗಾಗಿ ಕಳೆದ ಹಲವು ದಿನಗಳಿಂದ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಇಂದು ಬೆಳಿಗ್ಗೆ ಕೂಡ ಅತೀವ ಉತ್ಸಾಹದಿಂದ ಪರೀಕ್ಷೆಗೆ ತೆರಳಲು ಸ್ನಾನ ಮುಗಿಸಿ ಹೊರಬಂದಿದ್ದರು. ಆದರೆ, ಮನೆಯಿಂದ ಹೊರಬರುವಷ್ಟರಲ್ಲಿ ವಿಧಿ ಆಕೆಯ ಮೇಲೆ ಕ್ರೂರವಾಗಿ ಆಟವಾಡಿದೆ. ಹಠಾತ್ತನೆ ಹೃದಯಾಘಾತ ಸಂಭವಿಸಿ ಭೂಮಿಕಾ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಪೋಷಕರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡಿದರಾದರೂ, ಆಕೆ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಈ ಅನಿರೀಕ್ಷಿತ ಸಾವಿನಿಂದಾಗಿ ಬಂಬಲವಾಡ ಗ್ರಾಮದಲ್ಲಿ ಶೋಕದ ಛಾಯೆ ಮೂಡಿದ್ದು, ಮಗಳ ಭವಿಷ್ಯದ ಬಗ್ಗೆ ನೂರಾರು ಕನಸು ಕಂಡಿದ್ದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.



