ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಪ್ಪಳದಲ್ಲಿ ಕಾರ್ಖಾನೆಗಳ ಸಂಖ್ಯೆ ಹೆಚ್ಚಾಗಿದ್ದು ಕಪ್ಪುಕಣಗಳ ಧೂಳಿನಿಂದ ಜನ ರೋಸಿಹೋಗಿದ್ದಾರೆ. ಕುಡಿಯೋಕೆ ಒಳ್ಳೆ ನೀರಿಲ್ಲ, ಉಸಿರಾಡೋಕೆ ಗಾಳಿಯಿಲ್ಲ, ಕೆಲಸಕ್ಕೆ ಕೃಷಿಭೂಮಿ ಮಲಿನವಾಗಿದೆ. ಈ ರೀತಿ ಬದುಕೋಕಿಂತ ಸಾಯೋದು ಮೇಲು ಎಂದು ಗ್ರಾಮದ ಜನರು ದಯಾಮರಣ ಕೋರಿದ್ದಾರೆ.
ಹಿರೋಬಗನಾಳನದ ಗ್ರಾಮಸ್ಥರು ನಮ್ಮ ಊರುಗಳ ಸುತ್ತ ಇರುವ ಕಾರ್ಖಾನೆಗಳನ್ನು ಮುಚ್ಚಿ, ಇಲ್ಲವೇ ನಮಗೆ ದಯಾಮರಣ ನೀಡಿ ಎಂದು ಕಣ್ಣೀರಿಟ್ಟಿದ್ದಾರೆ. ಸುತ್ತಮುತ್ತಲಿನ ಕೈಗಾರಿಕಾ ಘಟಕಗಳಿಂದ ಬರುವ ಮಾಲಿನ್ಯವು ಅವರನ್ನು ದೀರ್ಘಕಾಲದ ಉಸಿರಾಟದ ರೋಗಿಗಳನ್ನಾಗಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ನಮ್ಮ ಊರಿನ ಬಹುತೇಕ ಮನೆಗಳಲ್ಲಿ ನಿಮಗೆ ನೆಬ್ಯುಲೈಸರ್ಗಳು ಕಾಣಿಸುತ್ತವೆ. ನಮ್ಮ ಊರು, ನಮ್ಮ ನೆಲದಲ್ಲಿ ಒಂದೊಂದು ಉಸಿರು ತೆಗೆದುಕೊಳ್ಳಲೂ ಸಮಸ್ಯೆಯಾಗಿದೆ. ಮನೆಯ ಗೋಡೆಗಳು ಮಾಲಿನ್ಯದಿಂದ ಕಪ್ಪಾಗಿವೆ. ಗ್ರಾಮದ ಜನರಲ್ಲಿ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆ ಇದೆ. ಇಂಥ ಬಾಳು ಬಾಳುವ ಬದಲು ಸಾಯುವುದೇ ಲೇಸು ಎಂದು ಜನ ಬೇಸರಿಸಿಕೊಂಡಿದ್ದಾರೆ.
ಕೊಪ್ಪಳದ ಸುತ್ತಮುತ್ತಲಿನ ಹಳ್ಳಿಗಳು ಸಹ ಮಾಲಿನ್ಯವನ್ನು ಎದುರಿಸುತ್ತಿವೆ. ಕಳೆದ ವರ್ಷ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಕಳೆದ ವರ್ಷದಿಂದ ಹಲವಾರು ಜನರು ಈ ಗ್ರಾಮಗಳನ್ನು ತೊರೆದಿದ್ದಾರೆ.



