ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಜಿಲ್ಲೆಯ ವಿಶ್ವವಿಖ್ಯಾತ ಭದ್ರಾ ಅಭಯಾರಣ್ಯದಲ್ಲಿ ಆಕಸ್ಮಿಕ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣದ ಅರಣ್ಯ ಸಂಪತ್ತು ನಾಶವಾಗಿದೆ.
ಅಭಯಾರಣ್ಯದ ಮುತ್ತೊಡಿ ಅರಣ್ಯ ವ್ಯಾಪ್ತಿಯ ಹೊಸಖಾನ್ ಮತ್ತು ಎಮ್ರಹಳ್ಳಿ ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತೀವ್ರ ಬಿಸಿಲು ಹಾಗೂ ಗಾಳಿಯ ವೇಗದಿಂದಾಗಿ ನೂರಾರು ಕಿಲೋಮೀಟರ್ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದೆ.
ಕಾಡಾನೆ, ಹುಲಿ, ಚಿರತೆ ಸೇರಿದಂತೆ ನೂರಾರು ಪ್ರಬೇಧದ ಪಕ್ಷಿ-ಪ್ರಾಣಿಗಳ ವಾಸಸ್ಥಾನವಾಗಿರುವ ಈ ಕಾಡಿನಲ್ಲಿ, ಅಪರೂಪದ ಮರಗಿಡಗಳು ಮತ್ತು ಸಸ್ಯ ಸಂಕುಲಗಳು ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿವೆ. ಇದರಿಂದ ವನ್ಯಜೀವಿಗಳಿಗೂ ಸಂಕಷ್ಟ ಎದುರಾಗಿದ್ದು, ಅಪಾರ ಪ್ರಮಾಣದ ನೈಸರ್ಗಿಕ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಕ್ಷಿಪ್ರ ಕಾರ್ಯ ಪಡೆಯೊಂದಿಗೆ ತೆರಳಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಸತತವಾಗಿ ತೊಡಗಿದ್ದಾರೆ.



