ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ನಲ್ಲಿ ಅಧಿವೇಶನ ಸಮಯ ಕಾಂಗ್ರೆಸ್ ಹಾಗೂ ಇತರ ಪಕ್ಷಗಳ ಸದಸ್ಯರ ವರ್ತನೆ ವಿರುದ್ಧ ಗರಂ ಆಗಿರುವ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಇಂದು ಈ ಬಗ್ಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ .
ಬಜೆಟ್ ಅಧಿವೇಶನ ಸಮಯ ಕಾಂಗ್ರೆಸ್ ಸದಸ್ಯರ ಅಶಿಸ್ತಿನ ನಡವಳಿಕೆ ಇಡೀ ಕಲಾಪಕ್ಕೆ ಅಡ್ಡಿಯಾಗಿತ್ತಿದೆ. ಅನವಶ್ಯಕ ಧರಣಿ, ಫಲಕ ಪ್ರದರ್ಶನದಿಂದ ಸಂಸತ್ತಿನ ಘನತೆ ಕುಗ್ಗುತ್ತಿದೆ. ಕಾಂಗ್ರೆಸ್ ಸಂಸದರು ಸಂಸತ್ತಿನ ಒಳಗೆ ಹಾಗು ಹೊರಗಡೆ ಕೂಗುತ್ತಿರುವ ಘೋಷಣೆ ಪ್ರಜಾಪ್ರಭುತ್ವದ ಮೂಲ ತತ್ವಗಳಿಗೆ ಧಕ್ಕೆ ಉಂಟಾಗುತ್ತಿದೆ ಎಂದು ದೇವೇಗೌಡರು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷದವರು ಎಂದರೆ ಅವರು ಸಂಸದೀಯ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಕಾಪಾಡಬೇಕು ಆದರೆ ಅವರ ವರ್ತನೆ ಕಂಡು ಮುಜುಗರವಾಗುತ್ತಿದ್ದು, ಹೀಗಾಗಿ ಈ ಪತ್ರ ಬರೆಯುವ ಸನ್ನಿವೇಶ ಬಂದಿದೆ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.
ಕಳೆದ 65 ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಅಧಿಕ ಸಮಯ ವಿಪಕ್ಷದಲ್ಲಿ ಕುಳಿತು ಕಳೆದಿದ್ದೇನೆ. ಆ ಸಮಯ ನೀವು ಕೂಡ ಅಲ್ಲಿಯೇ ಇದ್ದೀರಿ. ಆ ಸಮಯ ನಮಗೆ ನಮ್ಮ ಕರ್ತ್ಯವದ ಅರಿವು ಇತ್ತು. ಯಾವ ರೀತಿ ವರ್ತಿಸಬೇಕೆಂಬುವುದು ತಿಳಿದಿತ್ತು. ನಮ್ಮ ಕೆಲಸ ಯಾವುದೇ ರೀತಿಯ ಸಂಪ್ರದಾಯಗಳು ಮತ್ತು ಘನತೆಗೆ ಧಕ್ಕೆ ತರುವಂತಿರಲಿಲ್ಲ. ಆದ್ರೆ ಇಂದಿನ ವಿರೋಧ ಪಕ್ಷ ಕಂಡಾಗ ಮನಸ್ಸಿಗೆ ನೋವುಂಟಾಗುತ್ತದೆ ಎಂದು ಪತ್ರದಲ್ಲಿ ಬೇಸರ ಹೊರಹಾಕಿದ್ದಾರೆ.
ಇಲ್ಲಿ ನಾನು ಯಾರನ್ನು ಲಘುವಾಗಿ ನೋಡುತ್ತಿಲ್ಲ. ಆದರೆ ನನ್ನ ಉದ್ದೇಶ ವಿರೋಧ ಪಕ್ಷದ ಸ್ಥಾನದಲ್ಲಿರುವ ನೀವು, ನಿಮ್ಮ ರಾಜಕೀಯ ಅನುಭವ ಮತ್ತು ಪ್ರಬುದ್ಧತೆಯನ್ನು ಬಳಸಿಕೊಂಡು ನಿಮ್ಮ ಪಕ್ಷದ ನಾಯಕರು ಮತ್ತು ಇತರರೊಂದಿಗೆ ಮಾತನಾಡಿ ಸರಿಪಡಿಸಬೇಕು ಒತ್ತಾಯಿಸುತ್ತೇನೆ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.



